Friday, March 09, 2007

ಸಟೆಯೋ ದಿಟವೋ?

ಬೆಂಗಳೂರಿನ ಬೀದಿಯಲ್ಲಿ ನಡೆದುಹೋಗುತ್ತಿದ್ದೆ. ಸ್ವಲ್ಪ ದೂರದಲ್ಲಿ ಒಂದು ಪಾರ್ಕಿನಲ್ಲಿನ ಹುಲ್ಲು ಹಾಸಿತ್ತು. ಗಾಳಿಯು ತಂಪಾಗಿ ಬೀಸುತ್ತಿದ್ದು ಬಿಸಿಲಿನ ಝಳ ಅಷ್ಟಿರಲಿಲ್ಲ. ಆಹ್ಲಾದಕರವಾದ ವಾತಾವರಣ. ನೆಲದೆಡೆ ದಿಟ್ಟಿಸುತ್ತಾ ನಡೆದ ನನಗೆ ಒಮ್ಮೆ ಮೇಕೆಮರಿಯೊಂದರ "ಮ್ಯಾ" ದನಿ ಕೇಳಿತು. ಹಿತವಾದ ವಾತಾವರಣದಲ್ಲಿ ಮುಳುಗಿದ್ದ ನನ್ನನ್ನು ಆ ದನಿ ಎಲ್ಲಿಗೋ ಒಯ್ಯಿತು. ಒಮ್ಮೆಲೇ ಪರ್ವತದ ಮೇಲಿನ ತಂಪಾದ ಗಾಳಿಗೆ ಮೈಯೊಡ್ಡಿದವನಾಗಿ ನಾನು; ಕುರುಬನೊಬ್ಬನು ಒಂದು ಮೇಕೆ ಕುರಿಗಳ ದಿಂಡನ್ನು ಮೇಯಿಸುತ್ತಿದ್ದ ಹಾಗೆ; ಈ ಪ್ರಾಣಿಗಳೆಲ್ಲವೂ ಆನಂದದಿಂದ ನಲಿಯುವ ಹಾಗೆ ಆಗಿತ್ತು. ನನ್ನಲ್ಲಿಯೂ ಒಂದು ಆನಂದ, ತೃಪ್ತಿ ತುಂಬಿತ್ತು. ಈ ತೃಪ್ತಭಾವನೆಯ ಮೂಡಿಸಿದ ಮೇಕೆಯ ಕೇಕೆಯ ದನಿಯೆಡೆ ಕಣ್ಣು ಹಾಯಿಸಿದೆ.

ಆದರೆ ಕಂಡದ್ದೇನು? ಅಲ್ಲೊಂದು ವಿಕಾರವಾದ ಲಾರಿಯಿದ್ದು ಅದರಲ್ಲಿ ಮೇಕೆಗಳನ್ನು ಹಿಂಡು ಹಿಂಡು ತುಂಬಿದ್ದರು. ಒಂದರ ಮೇಲೊಂದು ಮೇಕೆಯಿದ್ದು ಅವುಗಳಿಗೆ ನಿಲ್ಲಲೂ ಜಾಗವಿರಲಿಲ್ಲ. ಹೇಗೆ ಉಸಿರಾಡುತ್ತಿದ್ದವೋ! ಆ ಮೇಕೆಯ ದನಿ ಆನಂದದಿಂದ ಕೂಡಿದ್ದಾಗಿರದೆ ಆ ಮೂಕ ಪ್ರಾಣಿಗಳ ಹಾಹಾಕಾರವಾಗಿದ್ದಿತು. ಕಟುಕರ ಬಳಿ ಒಯ್ಯಲ್ಪಡುತ್ತಿದ್ದ ಆ ಮುಗ್ಧ ಮೇಕೆಗಳ ದನಿ ಹಿಂದಿನ ಘಳಿಗೆಯಲ್ಲಿ ಎಷ್ಟು ಮುದ ನೀಡಿತ್ತೋ, ಈಗ ಅಷ್ಟೇ ಕಠೋರವಾಗಿ ಕೇಳಿಸಿತ್ತು. ನನ್ನ ಕರುಳನ್ನು ಕಿವುಚಿದ ಹಾಗಾಗಿತ್ತು.

ಕೇಳಿದ್ದು ಅದೇ ದನಿ. ಆ ದನಿ ಬಿದ್ದದ್ದು ಅದೇ ಕಿವಿಗೆ. ಕೇಳಿದವನೂ ನಾನೇ. ಸಂತೋಷ ನೀಡುವ ಅದೇ ದನಿ ಮರುಘಳಿಗೆಯಲ್ಲಿ ವಿಪರೀತಕ್ಕೆ ತಿರುಗಿತ್ತು.

ಪರ್ವತದ ಗಾಳಿ ನೀಡಿದ್ದ ಆಹ್ಲಾದವು ನಿಜವಾಗಿರಲಿಲ್ಲವೇ? ಅನುಭವಿಸಿದ ಮನಸ್ಸು ಅದನ್ನು ಆ ಕ್ಷಣಕ್ಕೆ ಸತ್ಯವೆಂದು ಒಪ್ಪಿರಲಿಲ್ಲವೇ?
ಕನಸಿನಲ್ಲಿನ ಸತ್ಯವೂ ಹೀಗೆಯೇ ಅಲ್ಲವೇ? ನನಗಂತೂ ಪರೀಕ್ಷೆಯ ಕನಸುಗಳು ಯಾವಾಗಲೂ ಬರುತ್ತಿದ್ದುವು. ನಾನು ಪರೀಕ್ಷೆಯಲ್ಲಿ ಉತ್ತರಿಸಲಾಗದ ಪ್ರಶ್ನೆಗಳು; ಶಾಲೆಗೆ ಪರೀಕ್ಷೆಯ ವೇಳೆಗೆ ಸರಿಯಾಗಿ ತಲುಪದಿರುವುದು; ಎಲ್ಲ ಹೀಗೆಯೇ! ಎದ್ದ ಮೇಲೂ ಸ್ವಲ್ಪ ಹೊತ್ತು ಬೇಕಾಗುತ್ತಿತ್ತು ನಿಜವಾದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು.

ಇವೆಲ್ಲ ಸಂಗತಿಗಳಲ್ಲಿ; ಇನ್ನೂ ಹಲವು ಸಂಗತಿಗಳಲ್ಲಿ ಅರಿವಾಗುವುದು ಒಂದು ವಿಷಯ. ಇವೆಲ್ಲವೂ ಮನಸ್ಸಿನ ಕಲ್ಪನೆಗಳೆಂಬುದು. ಇರುವ ನಿಜದ ಮೇಲೆ ನಮ್ಮ ಅಪೇಕ್ಷೆ-ಭಯಗಳ ಇಷ್ಟ-ಅನಿಷ್ಟಗಳ ಲೇಪವನ್ನು ಮಾಡಿ ನೋಡುವುದನ್ನು ನಾವು ಸದಾಕಾಲವೂ ನಮಗೆ ತಿಳಿಯದ ಹಾಗೆ ಮಾಡುತ್ತಿರುತ್ತೇವೆ; ನಮಗೆ ತೀರ ಅಭ್ಯಾಸವಾಗಿಬಿಟ್ಟಿದೆ. ಈ ರೀತಿಯ ಅನುಭವಗಾಳಾದಾಗ ಒಮ್ಮೊಮ್ಮ ಒಳ ಸರಿದು ನೋಡುವ ಅವಕಾಶ ಸಿಗುತ್ತದೆ.

ಇಷ್ಟು ನೈಜ ಅನುಭವ ಕೊಡುವ ಮನಸ್ಸು ಎಷ್ಟು ಶಕ್ತಿವಂತವಾದುದೋ ಊಹಿಸಿ ನೋಡಿದರೆ ಆಶ್ಚರ್ಯವೇ ಆಗುವುದು. ಸಂತೋಷದ ಸಮಯದಲ್ಲಿ ದುಃಖವನ್ನೂ, ಏನೂ ಇರದ ಸಮಯದಲ್ಲಿ ಆತಂಕವನ್ನೂ, ಒಂದನ್ನು ಇನ್ನೊಂದಾಗಿ ಕಾಣುವುದನ್ನು; ಇನ್ನೂ ಹಲವು ಪರಿಸ್ಥಿತಿಗಳಲ್ಲಿ ಮನಸ್ಸಿನ ಶಕ್ತಿಯ ಅರಿವಾಗುವುದು. ಆ ರೀತಿಯಲ್ಲಿ ನೋಡಿದರೆ ಈ ಜಗತ್ತೇ ಮನೋಮಯ.

ಇದರ ಬಗ್ಗೆಯೇ ದೊಡ್ದವರ ಮಾತು ಹೇಳಿರುವುದು. "ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ" ಎಂದು. ಮನಸ್ಸೇ ಬಂಧಕ್ಕು ಮೋಕ್ಷಕ್ಕೂ ಕಾರಣ. ಬಂಧವನ್ನು ಕಲ್ಪಿಸುವುದು ಮನಸ್ಸು. ಕಲ್ಪಿತಬಂಧದಿಂದ ಮುಕ್ತವಾಗುವುದೂ ಮನಸ್ಸೇ!

No comments: