Monday, January 29, 2007

ಭೈರಪ್ಪನವರ "ಪರ್ವ": ಚಿಂತನೆಗಳು: ಭಾಗ ೩

ಎಲ್ಲರಿಗೂ ತಿಳಿದ ಹಾಗೆ ಮಹಾಭಾರತದಲ್ಲಿ ಪಾಂಡವರದೇ ಮುಖ್ಯ ಸ್ಥಾನ. ಇವರ ವಿಚಿತ್ರದ ಹುಟ್ಟಿನ ಬಗ್ಗೆ ನನಗನಿಸಿದ್ದನ್ನು ಹಿಂದೆಯೇ ಬರೆದಿದ್ದೆ. ಪರ್ವದಲ್ಲಿ ಇದನ್ನು ಹೇಗೆ ನೋಡಲಾಗಿದೆ ಎನ್ನುವುದರ ಬಗ್ಗೆ ಕೂಡ ಹಿಂದಿನ ಭಾಗಗಳಲ್ಲಿಯೇ ಬರೆದದ್ದಾಯ್ತು. ಈಗ ಪರ್ವದಲ್ಲಿನ ಪಾಂಡವರು ನನಗೆ ಹೇಗೆ ಕಂಡರು ಅನ್ನುವುದರ ಬಗ್ಗೆ ಸ್ವಲ್ಪ ಬರೆಯುತ್ತೇನೆ.

ಚಿಕ್ಕಂದಿನಿಂದ ನನಗೆ ಮಹಾಭಾರತವೆಂದರೆ ಹೊಳೆಯುತ್ತಿದ್ದ ಹೆಸರು ಭೀಮನದು. ರಾಮಾಯಣವೆಂದರೆ ಆಂಜನೇಯನದು. ಇದು ನನ್ನ ವೈಯಕ್ತಿಕ ವಿಷಯವೋ ಅಥವಾ ಎಲ್ಲ ಮಕ್ಕಳಲ್ಲೂ ಹಾಗೆಯೋ ಎನ್ನುವುದನ್ನು ಅರಿಯೆ. ಭೀಮನ ನಂತರದ ಹೆಸರು ಅರ್ಜುನನದು. ಧರ್ಮರಾಯ ಮತ್ತು ಯಮಳರ ಬಗ್ಗೆ ಯೋಚನೆ ಸಹ ಬರುತ್ತಿರಲಿಲ್ಲ. ವಯಸ್ಸಾಗುತ್ತಾ ಭಾರತದ ಅರ್ಜುನನ ಪರಾಕ್ರಮವು ಮತ್ತು ಯುಧಿಷ್ಠಿರನ ಧರ್ಮಪ್ರಜ್ಞೆ ನನ್ನನ್ನು ಭೀಮನನ್ನು ಸ್ವಲ್ಪ ನೇಪಥ್ಯಕ್ಕೆ ತಳ್ಳುವ ಹಾಗೆ ಮಾಡಿತ್ತು. ಆದರೆ "ಪರ್ವ" ಓದಿದ ಮೇಲೆ ನನ್ನ ಚಿಕ್ಕಂದಿನ ಆಲೋಚನೆಯನ್ನು ಮತ್ತೊಮ್ಮೆ ನೋಡುವಂತಾಯ್ತು.

"ಪರ್ವ"ದಲ್ಲಿಯೂ ನನ್ನ ಚಿಕ್ಕಂದಿನಲ್ಲಿ ಹೇಗೋ ಹಾಗೆಯೇ! ಪಾಂಡವರಲ್ಲಿ ಭೀಮನಿಗೆ ಅಗ್ರ ಸ್ಥಾನ. ನಂತರದ್ದು ಅರ್ಜುನನದು. ಧರ್ಮ-ನಕುಲ-ಸಹದೇವರದು ನಾನು ಹಿಂದೆಯೇ ಬರೆದ ಹಾಗೆ ಒಂದು ರೀತಿಯ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವ ಬಗೆಯವರು.

ಭೀಮನ ಪ್ರಸಕ್ತಿ ಬಂದಾಗ ಅವನು ತನ್ನ ಹಿಂದಿನ ಹೆಂಡತಿಯಾದ ಹಿಡಿಂಬೆಯನ್ನು ನೋಡಲು ಹೋಗುತ್ತಿರುತ್ತಾನೆ. ಅದು ಯುದ್ಧದಲ್ಲಿ ತನ್ನ ಮಗನಾದ ಘಟೋತ್ಕಚನ ಸಾಹಾಯ್ಯವನ್ನು ಕೇಳಲು. ಹಿಂದೆ ಹಿಡಿಂಬೆಯನ್ನು ಮಗುವಾದ ಘಟೋತ್ಕಚನನ್ನೂ ಹಾಗೆಯೇ ಬಿಟ್ಟು ಹೊರಟದ್ದರ ಬಗ್ಗೆ ಅಳುಕು ಭೀಮನಿಗೆ ಸಹಜವಾಗಿರುತ್ತದೆ. ತಿಳಿದೂ ತಿಳಿದೂ ದೇವಸೇನಾನಿಯಾದ ವಾಯುವಿನಿಂದ ತನ್ನನ್ನು ಪಡೆದ ತಾಯಾದ ಕುಂತಿಯ ಮಾತನ್ನು ಕೇಳಿ ಹೆಂಡತಿಯನ್ನು ಬಿಟ್ಟದ್ದರ ಬಗ್ಗೆ ಪಶ್ಚಾತ್ತಾಪವೂ ಇರುತ್ತದೆ. ನಾನೆಂದಿಗೂ ಹಿಡಿಂಬೆಯೊಂದಿಗಿನ ಭೀಮನ ಪುನಃಸಮಾಗಮದ ವಿಷಯವಾಗಿ ಯೋಚಿಸಿರಲಿಲ್ಲ. "ಪರ್ವ" ಅದು ಹೇಗಾಗಿದ್ದಿರಬಹುದು ಅನ್ನುವುದನ್ನು ಮನೋಜ್ಞವಾಗಿ ತೋರುತ್ತದೆ. ಪತ್ನೀ-ಸುತರನನ್ನು ಬಿಟ್ಟು ಯಾವ ನೈತಿಕ ಅಧಿಕಾರದಿಂದ ಮಗನ ನೆರವನ್ನು ಕೇಳಲು ಭೀಮನಿಗೆ ಸಾಧ್ಯವಿದ್ದಿರಬಹುದು? ಘಟೋತ್ಕಚನಿಗೂ ಹೆಂಡತಿ ಮಕ್ಕಳಿರುತ್ತಾರೆ. ಮಗ ಯುದ್ಧದಲ್ಲಿ ಸಾಯುವನು ಎಂದು ಮೊದಲೇ ತಿಳಿದ ಪರ್ವದ ಓದುಗನಿಗೆ ಈ ಸಂಗತಿ ಸ್ವಲ್ಪ ದುಃಖವುಂಟಾಗುವ ಹಾಗೆ ಮಾಡುತ್ತದೆ.

ಭೀಮನದು ಭೌತಿಕ ಸ್ತರದಲ್ಲಿ ಮೂಡಿದ ಪಾತ್ರ. ತಿಳಿದವರೊಬ್ಬರು ಈ ಸಂಗತಿಯನ್ನು ಹೇಗೆ ಭೈರಪ್ಪನವರು ಧ್ವನಿಸಿದ್ದಾರೆ ಎಂಬುದರ ಬಗ್ಗೆ ಹೇಳಿದರು. "ಪರ್ವ"ದಲ್ಲಿ ಭೀಮನಿಗೆ ತನ್ನ ದೇಹದ ಅವಯವಗಳ ಬಗ್ಗೆಯೇ ಚಿಂತೆ. ಬೆವರು, ಹಸಿವು, ಬಿಸಿಲು ಇತ್ಯಾದಿ. ಜೊತೆಗೆ ಅವನ ಚಿಂತನೆಗಳೂ ಹಾಗೆ. ಧರ್ಮರಾಯನ ಧರ್ಮಕ್ಕೆ ಕಟ್ಟು ಬೀಳಲು ಭೀಮನಿಗೆ ಎಂದಿಗೂ ಸುತರಾಂ ಇಷ್ಟವಿರುವುದಿಲ್ಲ. ಜೂಜಾಡುವ ತನ್ನ ಅಣ್ಣನ ಕೈಗಳನ್ನೇ ಸುಟ್ಟು ಹಾಕುವ ಮಟ್ಟಿಗೆ ಕೋಪ ಅವನಿಗೆ. ದ್ರೌಪದಿಗಾದ ಅವಮಾನಕ್ಕೆ ಸರಿಯಾಗಿ ಪ್ರತಿಕ್ರಯಿಸಿದವನೇ ಭೀಮ. ಇವನೂ ದ್ರೌಪದಿಯೂ ಸಮಾನಮನಸ್ಕರು. ನನಗೆ "ಪರ್ವ"ದ ಭೀಮ ಬಹಳ ಹಿಡಿಸಿದ. ಪ್ರಾಯಃ ಏಕೆಂದರೆ, ಮೂಲದ ಭೀಮನಿಗೂ ಇವನಿಗೂ ಕಡಿಮೆ ಅಂತರವಿರುವ ಕಾರಣವಿರಬಹುದು.

ಇದಾದ ನಂತರ ಅರ್ಜುನನದು. ಅರ್ಜುನನು ಪರ್ವದಲ್ಲೂ ಅಪ್ರತಿಮ ಬಿಲ್ಲುಗಾರ. ಆದರೆ ಇದರ ಬಗ್ಗೆ ಅವನಿಗೆ ಮೂಲದಲ್ಲಿ ಇರುವ ಹಾಗೆ ಒಂದು ಜಂಭ. ಜೊತೆಗೆ ವಿಲಾಸಿ ಪುರುಷ ಬೇರೆ. ಇವನಿಗೆ ಹಲವರು ಹೆಂಡತಿಯರು. ದ್ರೌಪದಿಯನ್ನು ಗೆದ್ದ ಅರ್ಜುನ ಅವಳಿಂದ ಬಹಳಷ್ಟು ಪ್ರೀತಿಯನ್ನು ಗಳಿಸಿಯೂ ಅದನ್ನು ಉಳಿಸಿಕೊಳ್ಳಲಾರದೆ ಹೋಗುತ್ತಾನೆ. ದ್ರೌಪದಿಗೂ ಅರ್ಜುನನಿಗೂ ನಿರಂತರ ಶೀತಲ ಸಮರ. ಅರ್ಜುನನು ಸುಭದ್ರೆಯೊಡನೆ ದ್ವಾರಕೆಗೆ ತೆರಳುವಾಗ ಹುಣ್ಣಿಮೆಯ ರಾತ್ರಿಯಿರುತ್ತದೆ. ಇದು ಅವನ ರಸಿಕ ಮನೋಭಾವವನ್ನು ತೋರುತ್ತದೆಯೆಂದು ಪರ್ವದಲ್ಲಿ ಧ್ವನಿಸಿದೆ ಎಂದು ತಿಳಿದವರೊಬ್ಬರು ಸೂಕ್ತವಾಗಿ ತೋರಿದರು. ಅರ್ಜುನನದು ಇನ್ನೊಂದು ಗುಣವೆಂದರೆ ಅವನ "ಧರ್ಮಪರಾಯಣತೆ". ಧರ್ಮದ ಬಾಹ್ಯ ಆಚರಣೆಗಳಿಗೆ ಬಹಳ ಮನ್ನಣೆ ಕೊಡುವ ಪಾತ್ರ ಅರ್ಜುನನದು. ಮೂಲದಲ್ಲೂ ಹಾಗೆಯೇ! ಆದರೆ ಪರ್ವದಲ್ಲಿ ಇದನ್ನು ಅವಗುಣವೆಂಬಂತೆ ಭೈರಪ್ಪನವರು ತೋರಿದ್ದಾರೆ. ಧರ್ಮದ ಅಂತರಂಗವನ್ನು ತಿಳಿಯುವ ಕುತೂಹಲ ಅರ್ಜುನನಿಗಿರುವುದನ್ನು ನಾನು ಪರ್ವದಲ್ಲಿ ನೋಡಲಿಲ್ಲ. ಧರ್ಮಜನ ಬಲಗೈ ಭಂಟನೆಂದರೆ ಅರ್ಜುನನೇ! ಮೂಲದ ಉತ್ತರಗೋಗ್ರಹಣ ಪ್ರಸಂಗದಲ್ಲಿ ಅನಿತರಸಾಧಾರಣವಾಗಿ ಮೆರೆಯುವ ಅರ್ಜುನ ಪರ್ವದಲ್ಲಿ ಕಾಣುವುದಿಲ್ಲ. ಮೂಲದಲ್ಲಿ ಯುದ್ಧಸಮಯದಲ್ಲಿ ಅರ್ಜುನ ವಿಷಾದದಿಂದ ಕೂಡಿ ಕೃಷ್ಣನಿಂದ ಗೀತೋಪದೇಶ ಪಡೆಯುತ್ತಾನೆ. ಆದರೆ ಪರ್ವದಲ್ಲಿನ ಅರ್ಜುನ ಅದನ್ನು ಪಡೆಯುವಷ್ಟು ವಿನಯಸಂಪನ್ನನಾಗಿ ನನಗೆ ಕಾಣಲಿಲ್ಲ.

ಇತರ ಕಾವ್ಯಗಳಲ್ಲಿ ಭುಜಕೀರ್ತಿ-ಕಿರೀಟಗಳ ಹೊತ್ತ ಅತೀಂದ್ರಿಯ ಶಕ್ತಿ ಸಂಪನ್ನರಾದ ಪಾಂಡವರು ಇಲ್ಲಿ ಎಲ್ಲ ಮನುಷ್ಯರ ಹಾಗೆ ಕಾಣಿಸುತ್ತಾರೆ. ಭೀಮಾರ್ಜುನರ ಪಾತ್ರಗಳ ಬಗೆಗಂತೂ ಹಾಗೆ ಪ್ರತಿ ನಿಮಿಷಕ್ಕೂ ಅನ್ನಿಸುತ್ತಿತ್ತು. ಎಲ್ಲಿ ಆ ಭೀಮಸೇನ? ಎಲ್ಲಿ ಇಲ್ಲಿನ ಭೀಮ? ನಾರಾಯಣನ ಸಹಚರನಾದ ನರನ ಅವತಾರನಾದ ಮೂಲದ ಅರ್ಜುನನೆಲ್ಲಿ? ಪರ್ವದ ಅಹಂಕಾರಿ ವಿಲಾಸಿ ಪುರುಷ ಅರ್ಜುನನೆಲ್ಲಿ? ಆದರೂ ಕುರುಕ್ಷೇತ್ರಯುದ್ಧದಲ್ಲಿ ಗೆಲುವಿಗೆ ಕಾರಣರು ಈ ಇಬ್ಬರೆ! ಪರ್ವದಲ್ಲಿಯೂ ಹೀಗೇ ಇರುವುದು.

ಇವರಿಬ್ಬರ ನಂತರ ಧರ್ಮರಾಯನ ಪಾತ್ರ. ನನ್ನ ಪ್ರಕಾರ ಭೈರಪ್ಪನವರು ಈ ಪಾತ್ರವನ್ನು ಸರಿಯಾಗಿ ಬೆಳೆಸಲಿಲ್ಲ. ಪರ್ವದ ಧರ್ಮರಾಜ ಒಬ್ಬ ಶಕ್ತಿಹೀನನಾದ "ಧರ್ಮಪರಾಯಣ"ನಾದ ನಿಷ್ಕ್ರಿಯನಾದ ರಾಜ. ದ್ರೌಪದಿ-ಭೀಮರಿಗಂತೂ ಇವನನ್ನು ಕಂಡರೆ ಆಗದ ಹಾಗೆ ಪರ್ವ ತೋರಿದೆ. ದ್ರೌಪದಿಯ ಸ್ವಯಂವರದ ನಂತರ ಇವಳನ್ನು ಗೆದ್ದು ತಂದ ಅರ್ಜುನನ ಮುಂದೆ ಅವಳ ಮೇಲೆ ಆಸೆಯನ್ನು ಧರ್ಮರಾಯ ತೋರುತ್ತಾನೆ. ಪಾಂಡವರಲ್ಲಿ ಒಡಕು ಮೂಡದಿರಲೆಂದೇ ಕುಂತಿ ಪಾಂಚಾಲಿಯನ್ನು ಪಂಚಪತಿಗಳ ಪತ್ನಿಯಾಗೆಂದು ಒಪ್ಪಿಸುತ್ತಾಳೆ. ಆದರೆ ಇದಕ್ಕೆ ಬೀಜ ಧರ್ಮರಾಯನೇ! ದ್ರೌಪದಿಯನ್ನು ಗೆಲ್ಲಲು ಅಸಮರ್ಥನಾಗಿದ್ದೂ ಅವಳ ಮೇಲೆ ಆಸೆಯನ್ನು ಪಟ್ಟು ತಮ್ಮನ ಹೆಂಡತಿಯ ಮೇಲೆ ಕಣ್ಣು ಹಾಕಿದವನಾಗಿ ಧರ್ಮರಾಯ ಪರ್ವದಲ್ಲಿ ಕಾಣುತ್ತಾನೆ. ದ್ರೌಪದಿಯಂತೂ ಇವನ ಬಗ್ಗೆ "ಧರ್ಮದ ಗಬ್ಬು" ಬರುವ ಬಾಯವನೆಂದು ತನ್ನಲ್ಲಿಯೇ ಬೈದುಕೊಳ್ಳುತ್ತಾಳೆ.

ಇಡೀ ಭಾರತದಲ್ಲಿ ಧರ್ಮಜ ತಪ್ಪು ಮಾಡುವುದು ನನಗೆ ಕಂಡ ಹಾಗೆ ಎರಡು ಬಾರಿ. ಒಂದು ದ್ಯೂತದ ಆಮಂತ್ರಣವನ್ನು ಅಂಗೀಕರಿಸಿ ಪಟ್ತದ ರಾಣಿಯನ್ನೂ ತಮ್ಮಂದಿರನ್ನೂ ಪಣವಾಗಿಡುವುದು. ಎರಡನೆಯದು ದ್ರೋಣನನ್ನು ಕೊಲ್ಲುವಾಗ ಸುಳ್ಳು ಹೇಳುವುದು. ಎರಡನೆಯದು ತಪ್ಪಲ್ಲ ಬಿಡಿ. ಆದರೂ ಇವೆರಡೆ ನನಗೆ ಕಾಣಿಸುವುವು. ಯಕ್ಷಪ್ರಶ್ನೆಯ ಪ್ರಸಂಗದಲ್ಲಿ ತಮ್ಮಂದಿರೆಲ್ಲರನ್ನು ಉಳಿಸುವುದು ಧರ್ಮಜ ಅಲ್ಲವೇ? ಸ್ವರ್ಗಾರೋಹಣದಲ್ಲಿಯೂ ನೇರವಾಗಿ ಸ್ವರ್ಗಕ್ಕೆ ಹೋಗಲು ಅನುಮತಿ ದೊರೆತದ್ದು ಧರ್ಮಜನಿಗೇ ಅಲ್ಲವೇ? ಆದರೂ ಪರ್ವದಲ್ಲಿ ಇವೆರಡು ಸಂಗತಿಗಳು ಧರ್ಮರಾಯನ ಪರವಾಗಿ ವಕಾಲತ್ತಿನಲ್ಲಿ ಸೋತ ಹಾಗೆ ಕಾಣುತ್ತವೆ. ತೀರ ದುರ್ಬಲ ಪಾತ್ರವಾಗಿ ಕಂಡಿದೆ. ನನಗೆ ಪರ್ವದಲ್ಲಿನ ಧರ್ಮಜನ ಪಾತ್ರ ಹಿಡಿಸಲೇ ಇಲ್ಲ.

ನಕುಲ-ಸಹದೇವರನ್ನು ಬಿಡಿ, ಅಯ್ಯೋ ಪಾಪವೆನಿಸುತ್ತದೆ. ಇವರ ಪಾತ್ರಗಳನ್ನು ಯಾರೂ ದೊಡ್ಡದಾಗಿ ಚಿತ್ರಿಸಿಲ್ಲ. ಪರ್ವದಲ್ಲಿಯೂ ಹಾಗೆಯೇ !

ಪಾಂಡವರ ಶಕ್ತಿಗೆ ಅವರ ಧರ್ಮವೇ ಕಾರಣವೆಂದು ಭೈರಪ್ಪನವರು ತೋರಿದ್ದಾರೆ. ಉದಾಹರಣೆಗೆ ಎಂದಿಗೂ ದಾಸೀಗಮನವನ್ನು ಮಾಡದವಾರು ಪಾಂಡವರು. ಹೀಗೆ ಇಂದ್ರಿಯ ಲೋಲುಪರಾಗದೆ ತಮ್ಮಲ್ಲಿನ ಶಕ್ತಿಯನ್ನುಳಿಸಿಕೊಂಡು, ಸೋಲಿನ ಬೆಂಕಿಯಿಂದ ತಪ್ತರಾಗಿ ವಿಜಯಗಳಿಸಿದವರು ಪಾಂಡವರು. ಆದರೆ ಎಂಥ ವಿಜಯ ಅದು?

ಮುಂದಿನ ಬಹುಮುಖ್ಯವಾದ ಪಾತ್ರ, ಕುಂತಿಯ ಹಾಗೆಯೇ ಪಾಂಡವರನ್ನು ಒಟ್ಟಾಗಿಯೇ ಇಡುವ ಇನ್ನೊಂದು ಪಾತ್ರ. ಅದು ದ್ರೌಪದಿ! ಮಹಾಭಾರತದಲ್ಲಿ ಹಿಂದಿನ ಜನ್ಮದಲ್ಲಿ ಐದು ಪತಿಗಳ ವರವನ್ನು ಬೇಡಿದ ಕಾರಣ ದ್ರೌಪದಿಯು ಐದು ಜನ ಗಂಡಂದಿರನ್ನು ಪಡೆಯಬೇಕಾಯ್ತು ಎಂದೆಲ್ಲ ಕೇಳಿದ್ದೇವೆ. ಪರ್ವದ ಮಟ್ಟಿಗೆ ಧರ್ಮರಾಯನ ಪ್ರಸಂಗದಲ್ಲಿ ಇದರ ಕಾರಣವೇನೆಂದು ನೋಡಿದ್ದಾಯ್ತು. ಇವಳದ್ದು ಕೂಡ ದೊಡ್ಡ ಪಾತ್ರ.

ಇಲ್ಲಿ ಒಂದು ಮಾತು ಹೇಳಲು ಇಚ್ಛಿಸುತ್ತೇನೆ. ಭೈರಪ್ಪನವರ ಸ್ತ್ರೀಪಾತ್ರಗಳು ಅವರ ಪುರುಷಪಾತ್ರಗಳಿಗಿಂತ ವಿಭಿನ್ನವಾಗಿ ಉತ್ತಮವಾಗಿ ಮೂಡಿಬರುತ್ತವೆ. ಗೃಹಭಂಗದ ನಂಜಮ್ಮನಾಗಲಿ, ಸಾರ್ಥದ ಚಂದ್ರಿಕೆಯಾಗಲಿ, ಅಥವಾ ಧರ್ಮಶ್ರೀಯ ಲಿಲ್ಲಿಯಾಗಲಿ, ದಾಟುವಿನ ಸತ್ಯೆಯದಾಗಲಿ - ಇವರ ಸ್ತ್ರೀಪಾತ್ರಗಳೆಲ್ಲವೂ ವಿಭಿನ್ನ, ಸುಂದರ, ಮನೋಜ್ಞ. ಇವರ ಅಂತಃಕರಣ ಹೆಂಗಸರಿಗಾಗಿ ಮಿಡಿಯುತ್ತದೆಂದು ಯಾರಾದರೂ ಹೇಳಬಹುದು. ಭೈರಪ್ಪನವರ ತಾಯಿಯವರು ಅವರ ಮೇಲೆ ಗಾಢವಾದ ಪ್ರಭಾವ ಬೀರಿರುವುದನ್ನು ಅವರು ತಮ್ಮ ಆತ್ಮಕಥೆಯಾದ "ಭಿತ್ತಿ"ಯಲ್ಲೇ ಹೇಳಿಕೊಂಡಿದ್ದಾರೆ. ಅದೇ ಮುಂದುವರೆದಿದೆ ಎಂದು ಹೇಳಬಹುದು.

ಸರಿ ಮತ್ತೊಮ್ಮೆ ದ್ರೌಪದಿಯ ಕಡೆ ಬರೋಣ. ದ್ರೌಪದಿ ಐದು ಗಂಡಂದಿರನ್ನು ಪಡೆದ ಹೆಂಗಸು. ಯುವತಿಯಾಗಿ ಪಾಂಡವರ ಮನೆ ಸೇರಿದ ಕೃಷ್ಣೆ (ಪರ್ವದ ಉದ್ದಕ್ಕೂ ಇದೇ ಹೆಸರಿನಲ್ಲೇ ದ್ರೌಪದಿಯ ಸಂಬೋಧನೆ ಆಗುವುದು) ತನ್ನ ಅತ್ತೆಯಾದ ಕುಂತಿಯಿಂದ ಐದು ಬಲಿಷ್ಠರಾದ ಗಂಡಂದಿರನ್ನು ಒಟ್ಟಿಗೆ ನಿಭಾಯಿಸುವುದು ಹೆಮ್ಮೆಯ ಸಂಗತಿಯೆಂಬ ತಪ್ಪು ಕಲ್ಪನೆಗೆ ಒಳಗಾಗುತ್ತಾಳೆ. ಆದರೆ ಕುಂತಿಗೆ ಒಮ್ಮೆ ಒಬ್ಬರ ಸಂಪರ್ಕವಿದ್ದರೆ ದ್ರೌಪದಿಗೆ ಐದೂ ಜನರ ಸಂಪರ್ಕವೂ ಒಟ್ಟಿಗೆ. ನಂತರ ದ್ರೌಪದಿಯು ಅದು ಎಂಥ ತಪ್ಪಾಗಿತ್ತು ಎಂದು ನೆನೆಸಿಕೊಳ್ಳುತ್ತಾಳೆ. ಪ್ರತಿದಿನ ಒಬ್ಬ ಗಂಡನಿಗೆ ಮೀಸಲಾದ ದ್ರೌಪದಿ ಹಸಿದ ಹೆಬ್ಬುಲಿಗಳಿಗೆ ಹುಲ್ಲೆ ಸಿಗುವ ಹಾಗೆ ಸಿಕ್ಕಿಹೋಗುತ್ತಾಳೆ. ಇದು ನನ್ನ ಮಾತಲ್ಲ - ದ್ರೌಪದಿಯೇ ತನ್ನ ಸ್ವಗತದಲ್ಲಿ ಈ ರೀತಿಯ ಮಾತಾಡಿಕೊಳ್ಳುತ್ತಾಳೆ. ಅವಳ ಪರಿಸ್ಥಿತಿಗೆ ಎಂಥವರಾದರೂ ಅನುಕಂಪವ್ಯಕ್ತಪಡಿಸಬಹುದು. ನಂತರ ಒಂದು ವರ್ಷ ಒಬ್ಬ ಗಂಡನೊಂದಿಗೆ ಸಂಸಾರ ಎಂದು ಒಪ್ಪಂದವಾಗುತ್ತದೆ. ಈ ಸಂಗತಿ ಮಡಿವಂತರಿಗೆ ಕಷ್ಟವೆಂದೆನಿಸಬಹುದು. ಆದರೆ ಇದು ಮಹಾಭಾರತದ ಕಥೆಯನ್ನು ಗಮನಿಸಿದಾಗ ಅಸಮಂಜಸ ಸಂಗತಿಯೆಂದೇನೂ ಅನ್ನಿಸುವುದಿಲ್ಲ. ಅಂದ ಹಾಗೆ, "ಪರ್ವ" ಚಿಕ್ಕ ಮಕ್ಕಳಿಗಲ್ಲ!

ಭಾರತದ ಸ್ಥೂಲಕಥೆಯನ್ನೋದುವವರಿಗೆ ಇಂಥ ಒಂದು ಸಮಸ್ಯೆಯ ಅರಿವೇ ಆಗುವುದಿಲ್ಲ. ಭೈರಪ್ಪನವರ ಪ್ರತಿಭೆ ಅಂಥ ಕತ್ತಲೆಯ ಕೋಣೆಗಳಲ್ಲಿ ಬೆಳಕು ಚೆಲ್ಲುವುದೇ ಆಗಿದೆ.

ದ್ರೌಪದಿಯು ಬಹಳ ರೂಪವತಿಯೆಂದು ಮಹಾಭಾರತದಲ್ಲಿರುವಂತೆ ಪರ್ವದಲ್ಲಿಯೂ ಸಹ ತೋರಿಸಿದೆ. ಅವಳ ಮಟ್ಟಿಗಂತೂ ಅವಳ ರೂಪವೇ ಅವಳ ಶತ್ರು! ಹೆಚ್ಚು ವಯಸ್ಸಾದರೂ ತನಗಿಂತ ಕಿರಿಯರಾದ ಕೀಚಕ ಮತ್ತು ಜಯದ್ರಥರು ಕೂಡ ಅವಳಲ್ಲಿ ಆಸೆ ಪಡುತ್ತಾರೆ, ಅವಳನ್ನು ವ್ಯಥೆಗೀಡು ಮಾಡುತ್ತಾರೆ. ದ್ರೌಪದಿ ಈ ಅನರ್ಥಗಳಿಗೆ ಕಾರಣವಾದ ತನ್ನ ವಯಸ್ಸಾದರೂ ಮಾಸದ ಸುಂದರ ರೂಪವನ್ನೇ ಶಪಿಸಿಕೊಳ್ಳುತ್ತಾಳೆ. ಇವಳಿಗೆ ನಿಜವಾದ ಆಸರೆಯಾಗುವುದು ಭೀಮ. ತನ್ನ ಮನಸ್ಸಿಗೆ ಸ್ಪಂದಿಸಿ, ಕೋರಿಕೆಗಳನ್ನು ತೀರಿಸುವ ಭೀಮನೇ ಇವಳಿಗೆ ಅತ್ಯಂತ ಪ್ರಿಯನಾಗುತ್ತಾನೆ.

ಅವಳಿಗೆ ಪಾಂಡವರಿಂದ ಐದು ಮಕ್ಕಳು ಹುಟ್ಟುತ್ತಾರಷ್ಟೆ. ಆ ಉಪ-ಪಾಂಡವರು ಯುದ್ಧದ ಕೊನೆಯಲ್ಲಿ ಅಶ್ವತ್ಥಾಮನಿಂದ ಕ್ರೂರವಾದ ರೀತಿಯಲ್ಲಿ ಹತರಾಗುತ್ತಾರೆ. ಆಗ ಮೂಡಿಸುವ ಒಂದು ಪ್ರಸಂಗಕ್ಕೆ ಭೈರಪ್ಪನವರಿಗೆ "hats off" ಹೇಳದೆ ಬೇರೆ ದಾರಿಯಿಲ್ಲ. ಅಭಿಮನ್ಯುವಿನ ಸಾವಿನ ಸಮಯದಲ್ಲಿ ಅರ್ಜುನನು ಬಹಳ ಗೋಳಿಟ್ಟಿರುತ್ತಾನೆ. ಭೀಮನೂ ಘಟೋತ್ಕಚನ ಸಾವಿನಲ್ಲಿ ಹಾಗೆಯೇ ಮಾಡಿರುತ್ತಾನೆ. ಆದರೆ ಉಪಪಾಂಡವರು ಸತ್ತಾಗ - ಅವರನ್ನು ಕುರಿತು ಅವರ ತಂದೆಯರು ಶೋಕಿಸುವುದಿಲ್ಲ. ಯಾರು ಯಾವ ಮಗುವಿನ ತಂದೆಯೋ ಎಂದು ತಿಳಿಯದೆ ಈ ಶೋಕರಾಹಿತ್ಯವೋ ಎಂಬಂತೆ ಪರ್ವದಲ್ಲಿ ಪ್ರಶ್ನೆ ಉದ್ಭವಿಸುತ್ತದೆ. ಈ ಸಂಗತಿಯನ್ನು ಜ್ಞಾಪಿಸಿದ ಅಶ್ವತ್ಥಾಮನನ್ನು ಬಿಟ್ಟು ಬಿಡಿ ಎಂದು ದ್ರೌಪದಿ ಹೇಳಿದಾಗ ಮನಸ್ಸು ಅವಳ ಅವಸ್ಥೆಗೆ ಮರುಗದೆ ಇರುವುದಿಲ್ಲ.

ಭೈರಪ್ಪನವರ ಪ್ರತಿಭೆಯ ಬಗ್ಗೆ ಇನ್ನೊಂದು ಮಾತು. ಅವರು ಮೂಲಭಾರತದಲ್ಲಿಯೂ ಸಲೀಸಾಗಿ ಸೇರಬಲ್ಲಂಥ ಸನ್ನಿವೇಶಗಳನ್ನು ನಿರ್ಮಿಸಿದ್ದಾರೆ. ಇದು ಅಷ್ಟು ಸುಲಭಾವಾದ ಕೆಲಸವಲ್ಲ. ಹಿಂದಿನ ಪ್ಯಾರಾದಲ್ಲಿ ಬಂದ ಸಂಗತಿ ಈ ಬಗೆಯದು. ಪಾತ್ರಗಳ ಒಳ ಹೊಕ್ಕು ನೋಡುವ ಇವರ ಈ ಪ್ರತಿಭೆಯೇ ಈ ಉತ್ಕೃಷ್ಟ ಕೃತಿಗೆ ಕಾರಣವೆಂದು ಇಲ್ಲಿ ಮತ್ತೊಮ್ಮೆ ಹೇಳುತ್ತೇನೆ.

ಒಟ್ಟಿನಲ್ಲಿ, ಕುಂತಿಯ ಹಾಗೆಯೇ ದ್ರೌಪದಿಯದೂ ದೊಡ್ಡ ಪಾತ್ರ.

ಪರ್ವದ ಬಗ್ಗೆ ಬರೆಯಲು ಹೊರಟು ಆಗಲೇ ಮೂರು ಭಾಗಗಳಾಗಿವೆ. ಇದೇನು ಪರ್ವವನ್ನೇ ಮತ್ತೆ ಇಲ್ಲಿ "ಕಾಪಿ" ಮಾಡಬೇಕ ಅನ್ನುವ ಅನುಮಾನ ನನಗೆ. ಆದರೆ ಬರೆಯಲು ಆರಂಭಿಸಿದಾಗ ಅದು ಬರೆಸಿಕೊಂಡೇ ಹೋಗುತ್ತದೆ. "ಪರ್ವ" ಅಷ್ಟು ವಿಚಾರಪ್ರಚೋದಕ ಕೃತಿ. ಇನ್ನು ಹೆಚ್ಚು ಬರೆಯಲಾರೆ. ಮುಂದಿನ ಭಾಗಗಳ ವಿಷಯಗಳನ್ನು ಈಗಲೇ ಹೇಳಿಬಿಡುತ್ತೇನೆ.

ನಾಲ್ಕನೆಯ ಭಾಗದಲ್ಲಿ - ಇನ್ನಷ್ಟು ಪಾತ್ರಗಳ ಬಗ್ಗೆ - ಕೃಷ್ಣ (ಯಾದವ ಕುಲ) ಮತ್ತು ವ್ಯಾಸರ ಬಗ್ಗೆ. ಭೀಷ್ಮಾದಿಗಳನ್ನು ಸೇರಿಸಲು ಯತ್ನಿಸುತ್ತೇನೆ.

ಐದನೆಯ ಹಾಗೂ ಕೊನೆಯ ಭಾಗದಲ್ಲಿ - "ಪರ್ವ"ದ ಸಾಮಾನ್ಯವಾದರೂ ಅಸಾಮಾನ್ಯ ಸಂಗತಿಗಳು - ಆಹಾರ, ಜೀವನ ರೀತಿ, ಸೂಕ್ಷ್ಮ ಸಂಗತಿಗಳು - miscellaneous - ಅನ್ನುತ್ತಾರಲ್ಲ, ಅದರ ಬಗ್ಗೆ.

ಇದನ್ನು ಬರೆಯುತ್ತಿರುವುದು ನನ್ನ ಜ್ಞಾಪಕಕ್ಕೋಸ್ಕರ. ಹೀಗನ್ನಿಸಿತ್ತು ಪರ್ವವನ್ನು ಆಗ ಓದಿದಾಗ ಎಂದು ನನಗೆ ತಿಳಿಸಿಕೊಳ್ಳಲು. ಇತರರಿಗೆ ಇದು ಚಿಂತನೆಗೆ ಗ್ರಾಸವಾಗುವುದಾರದೆ ನನಗೆ ಸಂತೋಷ.

Saturday, January 20, 2007

Mindless media! Have mercy! Leave us alone!!

This is a plain rant as is quite evident from the title.

I am, to state it plainly, amazed and appalled at what is being dished out as front page worthy news nowadays in the print as well as the audio-visual media. The case in question is of Shilpa Shetty and the shot in the arm that her sagging career has received. The continuous nonsense that people have been subjected to can be termed as nothing but cruel torture. Guantanamo Bay probably pales in front of this!

It is not as if we have a choice. Whatever newspaper you look at and whatever news channel you turn to, it is always the same thing - poor Shilpa Shetty who has been racially abused!! Reality shows like "Big Brother" or any other show for that matter are on the lookout for gullible audiences who lap such controversies up. I wouldn't be surprised at all if it were found that this show staged the whole thing. Shilpa Shetty is an actress who gets suitably remunerated for her role on that show.

Then comes our wonderful Indian government! The external affairs ministry has probably nothing else to do other than twiddling its thumbs. That seems to precisely why it jumped to protest against this "act of racism"! It does this in its official capacity and reports it to its counterpart in the UK. Taxpayer money wasted for such frivolous nonsense!! India's image in the world is that of a soft state. Doing nothing to change that image, our government now tries to look silly!

To top it all is the news item I saw just now. Shilpa Shetty's mother has called the ejection of that person who bad mouthed Shilpa "a victory of good over evil". Why, O why should the Indian public be subjected to such tripe!

Shilpa Shetty is probably using all of this to get her minutes of fame as the wonderful Indian girl who battled it out in the inhospitable environs of Big Brother! It doesn't matter that she is getting a lot of money for it! Talk about eating the cake and having it too!

The media definitely deserves to be more responsible. It can't put its business needs above professional responsibility. Newspapers with pictures of scantily clad women in its front page make brisk business indeed. They don't seem to bother that they are dumbing down a complete generation of people.

The same can definitely be said about the 24 hour news channels. Their motto seems to be : If there is no news, make it! Having some news or the other is essential for their survival. However, as I said earlier, professional responsibility is lost here.

I try to overlook as many things in the news as possible. It now looks like I don't need to pay attention at all!

Friday, January 19, 2007

ಭೈರಪ್ಪನವರ ಪರ್ವ: ಚಿಂತನೆಗಳು : ಭಾಗ ೨

ಎಷ್ಟು ದಿವಸಗಾಳದವು ಬರೆದು ಎಂದೆನಿಸುತ್ತಿದೆ. ಪರ್ವ ಬುದ್ಧಿಯಿಂದ ಮನಸ್ಸಿನಿಂದ ಸ್ವಲ್ಪ ಜಾರುತ್ತಾ ಇದೆ. ಆದರೂ ಅದರಲ್ಲಿ ಬಂದ ಹಲವು ವಿಷಯಗಳನ್ನು ಮರೆಯಲು ಸಾಧ್ಯವಿಲ್ಲ. ಈ ಭಾಗದಲ್ಲಿ ಮುಖ್ಯವಾಗಿ ಮಹಾಭಾರತದ ಮುಖ್ಯ ವ್ಯಕ್ತಿತ್ವಗಳನ್ನು ಭೈರಪ್ಪನವರು ಹೇಗೆ ಚಿತ್ರಿಸಿದ್ದಾರೆನ್ನುವ ಬಗೆಗೆ ನನಗೆ ಕಂಡಿದ್ದನ್ನು ಬರೆಯುತ್ತೇನೆ.

ಕಥೆಯ ಹೆಣೆಯುವಿಕೆಯನ್ನು ಅದ್ಭುತವಾಗಿ ಭೈರಪ್ಪನವರು ಮಾಡಿದ್ದಾರೆ ಅನ್ನುವುದು ಸವಕಲು ಮಾತಾದೀತು. ಭಾರತದ ಕಥೆಯನ್ನ್ಜು ಸಿಂಹಾವಲೋಕನದ ರೀತಿಯಲ್ಲಿ ನಿರೂಪಿಸಿದ್ದಾರೆಂಬುದನ್ನು ಹಿಂದಿನ ಭಾಗದಲ್ಲಿಯೇ ಬರೆದಿದ್ದೆ. ಇದರೊಂದಿಗೆ ಕಥೆಯನ್ನು ಸ್ಮರಿಸುತ್ತಿರುವ ಪಾತ್ರಗಳು ಕಥೆಯ ಆ ಭಾಗವನ್ನು ಹೇಗೆ ನೋಡಿದ್ದರು ಎಂಬುದನ್ನೂ ವಿಶ್ಲೇಷಿಸಿದ್ದಾರೆ. ಅತೀಂದ್ರಿಯ ಶಕ್ತಿಗಳ ಉಲ್ಲೇಖ ಇದರಲ್ಲಿ ಲವಲೇಶದಷ್ಟೂ ಇರದಿದ್ದರೂ ಭಾರತೀಯ ಸಂಸ್ಕೃತಿಯ ಚಿಂತನಾಲಹರಿಯನ್ನು ಕ್ವಚಿದಪಿ ಬಿಟ್ಟಿಲ್ಲ.

ಕುಂತಿಯ ಸಿಂಹಾವಲೋಕನದಲ್ಲಿ ಹಿಮಾಲಯದ ತಪ್ಪಲಿನ ಜೀವನದ ಬಗ್ಗೆ, ಸಂಸಾರವನ್ನು ನಡೆಸಲು ಅಶಕ್ತನಾದ ಪಾಂಡುವಿನ, ದೇವ ಜನಾಂಗದ ಜನರ ಜೊತೆ ಆದ ಸಂಪರ್ಕದ ವಿಷಯಗಳು ಬರುತ್ತವೆ. ಕಥೆಯ ಆ ಭಾಗದಲ್ಲಿ ಕುಂತಿಯದೇ ಮುಖ್ಯ ಪಾತ್ರ ಎಂಬುದು ತಿಳಿದ ಮಾತೇ. ಭಾರತದಲ್ಲಿ ಕುಂತಿ ದೈಹಿಕವಾಗಿ ಹೇಗಿದ್ದಳು ಎಂಬ ವಿವರ ಬಂದಿದೆಯೋ ಇಲ್ಲವೋ ತಿಳಿಯದು. ಆದರೆ ಪರ್ವದಲ್ಲಂತೂ ಕುಂತಿಯ ವ್ಯಕ್ತಿತ್ವ ಮಾನಸಿಕವಾಗಿಯೂ ದೈಹಿಕವಾಗಿಯೂ ದೊಡ್ಡದು. ಅದರಿಂದಲೇ ಅವಳ ಮಕ್ಕಳು ಅಷ್ಟು ಶಕ್ತಿವಂತರಾದುದು. ಪಾಂಡವರಲ್ಲಿ ಮೊದಲ ಮೂವರು ಇವಳ ಮಕ್ಕಳು - ಮತ್ತು ಹೆಚ್ಚು ಖ್ಯಾತರು. ಯಮಳರಾದ ನಕುಲ-ಸಹದೇವರು ಮಾದ್ರಿಯ ಮಕ್ಕಳು, ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವಷ್ಟರ ಮಟ್ಟಿಗಿನ ಪಾತ್ರದವರು. ಧರ್ಮ ಭೀಮಾರ್ಜುನರ ಶಕ್ತಿ ತಾಯಿಂದ ಬಂದದ್ದು ಎಂದು ಚೆನ್ನಾಗಿ ಭೈರಪ್ಪನವರು ಕಾಣಿಸಿದ್ದಾರೆ. ಕುಂತಿಯ ಪಾತ್ರ ಮತ್ತೆ ಕರ್ಣನ ಪ್ರಸಕ್ತಿಯೊಂದಿಗೆ ಬರುತ್ತದೆ. ಕೊನೆಯಲ್ಲಿ ಯುದ್ಧಾನಂತರವೂ ಅವಳ ಪಾತ್ರ ಬರುತ್ತದೆ. ಒಟ್ಟಿನಲ್ಲಿ ಕುಂತಿಯ ಪಾತ್ರ ನೋಡಿದಾಗ ಮನಸ್ಸಿಗೆ ಬಂದ ಮಾತು - ದೊಡ್ಡ ಜೀವ ಎಂಬುದು. ರಾಜ ವೈಭವಗಳನ್ನೂ ಪತಿಯಿದ್ದರೂ ಅನುಭವಿಸಿದ ವೈಧವ್ಯವನ್ನೂ ವಯಸ್ಸಿಗೆ ಸಹಜವಾಗಿ ಬಂದ ಕಾಮನೆಗಳನ್ನೂ ಕಾಡಿನಲ್ಲಿ ಮಕ್ಕಳೊಂದಿಗೆ ಪಟ್ಟ ಪಾಡನ್ನೂ ಕೊನೆಯಲ್ಲಿ ಆದ ಮಾರಣಹೋಮವನ್ನೂ - ಇವುಗಳಿಗಿಂತ ಹೆಚ್ಚಿನದನ್ನೂ ಕುಂತಿ ಅನುಭವಿಸಿದಳು. ದೊಡ್ಡ ಜೀವ ಅನ್ನದೇ ಬೇರೆಯ ಮಾತಿಲ್ಲ. ಕುಂತಿಗೆ ಭೈರಪ್ಪನವರು ಕರ್ಣನ ಪ್ರಸಂಗದಲ್ಲಿ ಸ್ವಲ್ಪ ಕುಂದು ತಂದಂತೆ ಕಂಡರೂ ಆಗಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಅದನ್ನು ಅನಿವಾರ್ಯವೆಂಬಂತೆ ಕಾಣಿಸಿ ಅವಳ ಘನತೆಯನ್ನು ಎತ್ತಿಯೇ ಹಿಡಿದಿದ್ದಾರೆ ಎಂದು ಹೇಳಬೇಕು.

ಪಾಂಡವರ ತಾಯಿಯ ಪಾತ್ರ ಹೀಗಾದರೆ ಕೌರವರ ತಾಯಿಯ ಪಾಡು ಹೇಗೆ? ಮೂಲದ ಭಾರತದಲ್ಲಿ ಗಾಂಧಾರಿ ಪತಿವ್ರತಾಧರ್ಮದ ಪಾಲನೆಗೋಸ್ಕರ ಕಣ್ಣುಪಟ್ಟಿ ಕಟ್ಟಿಕೊಂಡರೆ ಇಲ್ಲಿ ಸ್ವಲ್ಪ ದೊಡ್ಡಸ್ತಿಕೆ ತೋರಲು ಮಾಡಿದ ಕೆಲಸವೆಂಬಂತೆ ಭೈರಪ್ಪನವರು ತೋರಿದ್ದಾರೆ. ಇಲ್ಲಿಯೂ ಗಾಂಧಾರಿ ಪತಿವ್ರತೆಯೇ! ಆದರೆ ಅಕೆಯ ಕಣ್ಣುಪಟ್ಟಿಯನ್ನು ಧರಿಸುವುದಕ್ಕೆ ಕಾರಣ ಬೇರೆ. ಕುರುಡನಾದ ಧೃತರಾಷ್ಟ್ರನಿಗೆ ಹೆಣ್ಣನ್ನು ಯಾರು ತಾನೇ ಕೊಡುತ್ತಿದ್ದರು? ಕನ್ಯಾಶುಲ್ಕವನ್ನು ಕೊಟ್ಟ ನಂತರವೇ ಭೀಷ್ಮರು ಗಾಂಧಾರಿಯನ್ನು ಕರೆತಂದದ್ದು. ಶುಲ್ಕಕ್ಕಾಗಿ ಬಂದ ಹೆಣ್ಣು, ಕುರುಡನನ್ನು ಮದುವೆಯಾಗುತ್ತಿದ್ದೇನೆ, ಇನ್ನು ಪ್ರಪಂಚವನ್ನು ನೋಡಿದರೇನು, ಬಿಟ್ಟರೇನು ಎಂಬ ವೈರಾಗ್ಯದ ಭಾವನೆ ಗಾಂಧಾರಿಯ ಈ ವರ್ತನೆಗೆ ಕಾರಣ (ಭೈರಪ್ಪನವರ ಪ್ರಕಾರ). ಹಸ್ತಿನಾವತಿಗೆ ಬಂದ ಮೇಲೆ ಎಲ್ಲರೂ ಈ ಕೆಲಸ ಮಾಡಿದ ಗಾಂಧಾರಿಯನ್ನು ದೊಡ್ಡವಳು, ಪರಮ ಸಾಧ್ವಿ ಎಂದೆಲ್ಲಾ ಬಗೆದಾಗ ಇವಳಲ್ಲೂ ಇದನ್ನು ಮುಂದುವರೆಸಿದರೆ ಚೆನ್ನ ಎಂಬ ಭಾವನೆ ಬಲಿತು ಹಾಗೆಯೇ ಮಾಡುತ್ತಾಳೆ. ಭೈರಪ್ಪನವರು ಇಲ್ಲಿ ಮೂಲದ ಭಾರತದಲ್ಲೂ ಅಸಂಗತವೆಂದು ಕಾಣದೆ ಇರುವ ಹಾಗೆ ಕಥೆಯನ್ನು ಹೆಣೆದಿದ್ದಾರೆ. ಕುಂತಿಯ ಮೇಲೆ ಈರ್ಷ್ಯೆ ಈಕೆಗೆ ಇದ್ದದ್ದೇ! ಯುದ್ಧಾನಂತರ ಕಣ್ಣುಪಟ್ಟಿ ಬೇಕೆಂದೇ ತೆಗೆಸುತ್ತಾಳೆ. ಯುದ್ಧರಂಗವನ್ನು ಕೃಷ್ಣಕುಂತಿಯರೊಡನೆ ನೋಡಿ ಬರುತ್ತಾಳೆ. ಮತ್ತೆ ಪಟ್ಟಿ ಧರಿಸುತ್ತಾಳೆ. ಇಲ್ಲಿ ಒಂದು ಕರುಣಾಜನಕವಾದ ಸಂದರ್ಭ ಸ್ಮರಿಸಲು ಯೋಗ್ಯ. ಕೌರವರೆಲ್ಲರೂ ಹತರಾದಾಗ ಪಾಂಡವರ ಕಡೆಯವರೆಲ್ಲರೂ ಅಂಧದಂಪತಿಗಳನ್ನು ನೋಡಲು ಹೋಗುತ್ತಾರೆ. ಬಲವಂತವಾಗಿ ನೋಡುವುದನ್ನು ಬಿಟ್ಟ ಗಾಂಧಾರಿಗೆ ತನ್ನ ಮಕ್ಕಳ ಮುಖಪರಿಚಯವಿರಲಿಲ್ಲವೆಂಬುದನ್ನು ಭೈರಪ್ಪನವರು ಜ್ಞಾಪಿಸುತ್ತಾರೆ. ಆಗ ಅವಳು ಪಾಂಡವರ ಕಡೆಯವರನ್ನು "ನನ್ನ ಮಕ್ಕಳು ನೋಡಲು ಚೆನ್ನಾಗಿದ್ದರೇ?" ಎಂದು ಕೇಳಿದಾಗ ಕರುಳು ಕಿವುಚಿಬರುತ್ತದೆ. ಎಂಥ ಕಲ್ಲೆದೆಯವರೂ ಇಲ್ಲಿ ಸ್ವಲ್ಪ ಸಹಾನುಭೂತಿಯನ್ನು ಗಾಂಧಾರಿಗೆ ನೀಡಿಯೇ ನೀಡುತ್ತಾರೆ.

ಗಾಂಧಾರಿಯನ್ನು ನೋಡಿದ ಮೇಲೆ ಧೃತರಾಷ್ಟನ ಸರದಿ. ಇವನ ಕುರುಡುತನ ಎರಡು ಬಗೆಯದು. ಭೌತಿಕ ಪ್ರಪಂಚವನ್ನು ಕಾಣದೆ ಇರುವುದು ಒಂದಾದರೆ ಧರ್ಮವನ್ನು ಕಾಣದೆ ಇರುವುದು ಇನ್ನೊಂದು. ಭೈರಪ್ಪನವರು ಇದನ್ನು ಹೀಗೆಯೇ ತೋರಿದ್ದಾರೆ. ಆಗಿನ ಕ್ಷತ್ರಿಯರು ಲೋಲುಪರು. ಸೂತಜಾತಿಯ ಪರಿಚಾರಿಕೆಯರನ್ನು ತಮ್ಮ ಕಾಮಾಗ್ನಿಯನ್ನು ಆರಿಸಲು ಬಳಸಿಕೊಳ್ಳುತ್ತಿದ್ದರು. ಧೃತರಾಷ್ಟ್ರನೂ ಇದಕ್ಕೆ ಹೊರತಲ್ಲ! ಕುರುಡನಾದರೂ ಲೋಲುಪತೆ ಬಿಟ್ಟಿರಲಿಲ್ಲವೆಂದು ಭೈರಪ್ಪನವರು ಸ್ಪಷ್ಟವಾಗಿ ತೋರಿದ್ದಾರೆ. ಪರ್ವದಲ್ಲಿ ಗಾಂಧಾರಿಯಿಂದ ಹದಿನಾಲ್ಕು ಮಕ್ಕಳನ್ನು ಧೃತರಾಷ್ಟ್ರ ಪಡೆದರೆ, ಮಿಕ್ಕ ಎಂಭತ್ತಾರನ್ನು ದಾಸಿಯರಲ್ಲಿ ಪಡೆದದ್ದು. ಇವನ ಒಂದು ಪಾತ್ರದ ವಿಶೇಷವನ್ನು ಇಲ್ಲಿ ಸ್ಮರಿಸಬೇಕು. ಕುರುಡನಾದರೂ ಅವನಿಗೆ ಕತ್ತಲೆಯ ಭಯ! ಉರಿಯುತ್ತಿರುವ ಎಣ್ಣೆಯ ವಾಸನೆಯಿಂದ ದೀಪ ಬೆಳಗುತ್ತಿದೆಯೋ ಇಲ್ಲವೋ ಎಂದು ಊಹಿಸುವ ಕುರುಡನಿಗೆ ಆ ಬೆಳಕು ಬೇಕು! ಆ ಬೆಳಕಿನ ಸೌಖ್ಯ ಬೇಕು! ಸಲಸಲವೂ ದಾಸಿಯನ್ನು "ದೀಪ ಉರಿಯುತ್ತಿದೆಯೇ" ಎಂದು ಕೇಳುತ್ತಾನೆ. ಅವನ ಪಾತ್ರವನ್ನು ಈ ಒಂದು ನಡೆವಳಿಕೆಯಿಂದ ಭೈರಪ್ಪನವರು ಚೆನ್ನಾಗಿಯೇ ಸೆರೆಹಿಡಿದಿದ್ದಾರೆ.

ಇದಾದ ಮೇಲೆ ಕಥೆಯ ಆರಂಭದಲ್ಲಿ ಮಾತ್ರ ಬರುವ ಧೃತರಾಷ್ಟ್ರನ ತಮ್ಮ ಪಾಂಡುವಿನ ಪಾತ್ರದ ಬಗ್ಗೆ ನೋಡೋಣ. ಮೂಲದಲ್ಲಿ ಋಷಿಯಿಂದ ಶಪ್ತನಾದ ಪಾಂಡು ಹಿಮಾಲಯದೆಡೆ ಪತ್ನೀಸಮೇತನಾಗಿ ತೆರಳುತ್ತಾನೆ. ಪರ್ವದಲ್ಲಿ ಹಾಗಲ್ಲ. ಯೌವನದ ಹೊಸ್ತಿಲಲ್ಲಿಯೇ ಅತಿಯಾದ ಕಾಮಕೇಳಿಯಿಂದ ತನ್ನ ಶಕ್ತಿಯೆಲ್ಲವನ್ನು ಕಳೆದುಕೊಂಡ ನತದೃಷ್ಟ ಪಾಂಡು. ಇವನು ಕುಂತಿಯ ನೆನಪಾಗಿಯೇ ಪರ್ವದಲ್ಲಿ ಬರುತ್ತಾನೆ. ಅಂದವಾದ ಹೆಂಡತಿಯೊಂದಿಗೆ ಸಂಸಾರ ಮಾಡಲು ಅಶಕ್ತನಾದ ಪಾಂಡುವಿಗೆ ಕುಂತಿ ಹೇಗೆ ತಾಯ ಹಾಗೆ ಕಾಣುತ್ತಾಳೆ ಎಂದು ಭೈರಪ್ಪನವರು ತೋರಿದ್ದಾರೆ. ಸಂತಾನಾಪೇಕ್ಷಿಯಾಗಿ ಅವನು ಹಿಮಾಲಯದ ತಪ್ಪಲಿನಲ್ಲಿ ದೇವ ಜನಾಂಗದ ಮುಖ್ಯರನ್ನು ಸಂತಾನಭಿಕ್ಷೆಗಾಗಿ ಬೇಡುತ್ತಾನೆ. ಕ್ಷೇತ್ರವಂತೂ ಕುಂತಿಯದು. ಪರ್ವದ ಪಾಂಡುವಿಗೆ ಔಷಧೋಪಚಾರಗಳಿಂದ ತನ್ನ ಹಿಂದಿನ ಶಕ್ತಿ ಮರಳಬಹುದೆಂಬ ಆಸೆಯಿರುತ್ತದೆ. ಆದರೆ ಆಸೆ ಚಿಗುರುತ್ತಲೇ ಪಾಂಡು ಮರಣವನ್ನಪ್ಪುತ್ತಾನೆ. ಪಾಂಡವರೂ ವಸ್ತುತಃ ಪಾಂಡುವಿನ ಮಕ್ಕಳಾದರೂ ಕೇವಲ ಹೆಸರಿಗೆ ಮಾತ್ರ ಅವನ ಮಕ್ಕಳು ಎಂದು ಎಲ್ಲರಿಗೂ ತಿಳಿದಿರುತ್ತದೆ. ಕಥೆಯಲ್ಲಿ ಅಲ್ಲಲ್ಲಿ ಕುಂತಿಯ ಮಕ್ಕಳು ಎಂದೇ ಪಾಂಡವರನ್ನು ಹೆಸರಿಸುತ್ತಾರೆ.

ಪಾಂಡವರ ಪಾತ್ರಗಳ ಬಗ್ಗೆ ಬರೆಯಲು ಹೊರಟಿದ್ದೆ. ಅದು ಹೋಗಿ ಅವರ ಮಾತಾಪಿತೃಗಳ ಬಗ್ಗೆ ಆಯ್ತು. ಈಗಿನ ಭಾಗ ಆಗಲೇ ದೊಡ್ಡದಾಗುತ್ತಾ ಬಂದಿದೆ. ಮುಂದಿನ ಭಾಗದಲ್ಲಿ ನನಗೆ ಕಂಡ ಬೇರೆಯ ಸಂಗತಿಗಳ ಬಗ್ಗೆ ಬರೆಯುತ್ತೇನೆ.