Tuesday, October 24, 2006

ಭೈರಪ್ಪನವರ ವಂಶವೃಕ್ಷ : ನನ್ನ ಅನಿಸಿಕೆಗಳು

ನಮ್ಮ ಮನೆಯ ಬಳಿ ಒಂದು ನಗರ ಕೇಂದ್ರ ಗ್ರಂಥಾಲಯವಿದೆ. ಅಲ್ಲಿ ಹೊಸ ಪುಸ್ತಕಗಳೇನು ಇಲ್ಲದಿದ್ದರು, ಹಿಂದೆ ಪ್ರಕಟವಾದ ಕೆಲವು ಒಳ್ಳೆಯ ಪುಸ್ತಕಗಳ ಸರಕು ಅಲ್ಲಿದೆ. ಆ ಪುಸ್ತಕಗಳಲ್ಲಿ ಭೈರಪ್ಪನವರ ಕೆಲವು ಪುಸ್ತಕಗಳೂ ಇದ್ದುವು. ವಂಶವೃಕ್ಷ ನಾನು ಹಿಂದೆಯೇ ಓದಿದ್ದ ಕೃತಿ. ಆದರೆ ಆಗ ಓದಿದ್ದು ಆಂಗ್ಲದ ಅನುವಾದದಲ್ಲಿ. ಈ ಪುಸ್ತಕವನ್ನು ನಾನೋದಿದ್ದೇನೆ ಎಂದು ತಿಳಿದಿದ್ದೆ. ಆದರೂ ಒಮ್ಮೆ ಮೂಲದ ಕನ್ನಡದಲ್ಲಿ ಓದಿ ನೋಡೋಣವೆಂಬ ಆಸಕ್ತಿ. ಮನೆಗೆ ತಂದಾಗ ನನಗೆ ಮತ್ತೆ ತಿಳಿಯಿತು - ಎಷ್ಟೇ ಒಳ್ಳೆಯ ಅನುವಾದವಾದರೂ ಮೂಲದ ಸೊಗಡನ್ನು ಉಳಿಸಿಕೊಳ್ಳುವುದು ಕಷ್ಟ ಎಂದು. ಖ್ಯಾತ ಸಿನೆಮಾ ಕೂಡ ಆದ ವಂಶವೃಕ್ಷದಲ್ಲಿ ಈ ನಿಜ ಪ್ರಖರವಾಗಿ ಗೋಚರಿಸಿತು.

ವಂಶವೃಕ್ಷ ನಂಜನಗೂಡು-ಮೈಸೂರು ಪ್ರಾಂತಗಳಲ್ಲಿರುವ ಕುಟುಂಬಗಳ ಕಥೆ. ಭೈರಪ್ಪನವರ ಕಥಾಪುಸ್ತಕಗಳ ಹೆಸರುಗಳು ಕಥೆಯನ್ನು ಬಹಳ ಚೆನ್ನಾಗಿ ಸೂಕ್ತವಾಗಿ ಪ್ರತಿಬಿಂಬಿಸುತ್ತವೆ. ಇಲ್ಲಿಯೂ ಹಾಗೆಯೇ. ಈ ಕಥೆಗೆ "ವಂಶವೃಕ್ಷ" ಎಂಬ ಹೆಸರು ಎಷ್ಟು ಸರಿಯೆಂಬುದು ಪುಸ್ತಕದ ಮಧ್ಯದಿಂದ ತಿಳಿಯಲು ಪ್ರಾರಂಭವಾಗಿ ಕಥೆ ಕೊನೆಗೊಳ್ಳುವೆ ವೇಳೆ ಆ ವೃಕ್ಷ ನಮ್ಮ ಕಲ್ಪನೆಯನ್ನೆಲ್ಲಾ ವ್ಯಾಪಿಸಿಬಿಟ್ಟಿರುತ್ತದೆ.

ಕರ್ಮಠರಾದ ಆದರೆ ವಿದ್ವಾಂಸ ಹಾಗು ಯೋಚನಾಶಕ್ತಿಯನ್ನು ಹೊಂದಿದ ಶ್ರೀನಿವಾಸ ಶ್ರೋತ್ರಿಗಳು ಈ ಕಥೆಯ ಮುಖ್ಯ ಪಾತ್ರ. ಇವರೇ ಈ ವಂಶವೃಕ್ಷದ ಕಥೆಗೆ ಬೇರು ಮತ್ತು ಮರದ ಮುಖ್ಯ ಭಾಗ. ಕಥೆ ಇವರ ಮಗನಾದ ನಂಜುಂಡ ಶ್ರೋತ್ರಿಯನ ಮರಣದೊಂದಿಗೆ ಆರಂಭವಾಗುತ್ತದೆ. ಮಗನನ್ನು ಕಳೆದುಕೊಂಡ ತಾಯಿ ಭಾಗೀರಥಮ್ಮ, ಗಂಡನನ್ನು ಕಳೆದುಕೊಂಡ ಕಾತ್ಯಾಯನಿ ಮತ್ತು ತನಗೆ ತಿಳಿಯುವ ಮುಂಚೆಯೇ ತಂದೆಯನ್ನು ಕಳೆದುಕೊಂಡ ಮಗು ಚೀನಿ ಆರಂಭದಲ್ಲಿ ಕಾಣುತ್ತಾರೆ. ಇದೇ ಕುಟುಂಬಕ್ಕೆ ಸೇರಿದ ಮತ್ತೊಂದು ಬಹಳ ಒಳ್ಳೆಯ ಪಾತ್ರ - ಕೆಲಸದವಳಾದರೂ ಮನೆಯ ಸದಸ್ಯೆಯಂತೆ ನಡೆಯುವ ಲಕ್ಷ್ಮಿಯದು.

ಈ ಕುಟುಂಬಕ್ಕೆ ಒಂದು ವಿದ್ವತ್ತಿನ ಸಂಬಂಧದಿಂದ ಮತ್ತೊಂದು ಕುಟುಂಬ ಸೇರುತ್ತದೆ. ಮೈಸೂರಿನ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರು ಮತ್ತು ಸಂಶೋಧಕರು ಆದ ಸದಾಶಿವರಾಯರದೇ ಈ ಕುಟುಂಬ. ಇವರಿಗೆ ಒಬ್ಬ ತಮ್ಮ - ಇಂಗ್ಲೀಷಿನ ಅಧ್ಯಾಪಕ ಹಾಗು ನಾಟಕಪ್ರಿಯ ಆಧುನಿಕ - ರಾಜಾರಾಯ. ಸದಾಶಿವರಾಯರ ಹೆಂಡತಿಯಾದ ಮುಗ್ಧೆ ನಾಗಲಕ್ಷ್ಮಿ. ಇವರ ಮಗ ಪೃಥ್ವಿ.

ಮರಣಿಸಿದ ಪತಿಯ ಬಿ.ಏ ಓದುವ ಆಸೆಯನ್ನು ನೆರವೇರಿಸುವ ನಂಬಿಕೆಯನ್ನು ಹೊಂದಿದ ಕಾತ್ಯಾಯನಿ ನಂಜನಗೂಡಿನಿಂದ ಮೈಸೂರಿನ ಕಾಲೇಜಿಗೆ ಹೋಗುವ ಪ್ರಸಂಗದೊಂದಿಗೆ ಕಥೆಗೆ ತಿರುವು ಸಿಗುತ್ತದೆ. ಅತ್ತೆ ಒಪ್ಪದಿದ್ದರೂ ಮಾವನವರು ಒಪ್ಪಿ ಸೊಸೆಯನ್ನು ಕಳಿಸುತ್ತಾರೆ. ಅಲ್ಲಿ ಆಕೆ ರಾಜಾರಾಯನ ಸಂಪರ್ಕವನ್ನು ಹೊಂದುತ್ತಾಳೆ. ಯೌವನಾವಸ್ಥೆಯ ಈರ್ವರ ಸಂಪರ್ಕ ಪರಿಚಯದಿಂದ ಪ್ರೇಮಕ್ಕೆ, ಪ್ರೇಮದಿಂದ ಉತ್ಕಟವಾದ ಪ್ರೇಮಕ್ಕೆ ತಿರುಗುವುದನ್ನು ಭೈರಪ್ಪನವರು ಚೆನ್ನಾಗಿ ನಿರೂಪಿಸಿದ್ದಾರೆ. ಒಂದು ಕಡೆ ತನ್ನ ಮರಣಿಸಿದ ಪತಿಯ ಕುಟುಂಬದ ಕಡೆಗಿನ ಕರ್ತವ್ಯ, ಮತ್ತೊಂದು ಕಡೆ ತನ್ನ ಯೌವನದ ಸಹಜ ವಾಂಛೆಗಳು - ಇವೆರಡರ ನಡುವೆ ಡೋಲಾಯಮಾನವಾದ ಕಾತ್ಯಾಯನಿಯ ಅವಸ್ಥೆ ಮನೋಜ್ಞವಾಗಿ ವರ್ಣಿತವಾಗಿದೆ. ಕೊನೆಗೆ ಆಶೆಯ ಮಹಾಪೂರ ಅವಳ ಧಮನಿಗಳಲ್ಲಿ ಹರಿಯುತ್ತಿದ್ದ ಸಂಪ್ರದಾಯವನ್ನು ಆ ಕಾಲಕ್ಕಾದರೂ ಮುಳುಗಿಸಿ ರಾಜಾರಾಯನ ಜೊತೆಗೆ ಮದುವೆ ನಡೆದುಹೋಗುತ್ತದೆ. ಇಲ್ಲಿ ಒಂದಂಶವನ್ನು ಗಮನಿಸಲೇ ಬೇಕು. ಇಪ್ಪತ್ತನೆಯ ಶತಮಾನದ ಮೊದಲನೆಯ/ಎರಡನೆಯ ದಶಕದಿಂದ ಮೂರು-ನಾಲ್ಕು ದಶಕಳ ಕಾಲ ನಡೆಯುವ ಈ ಕಥೆಯಲ್ಲಿ ಈ ಮದುವೆ ನಡೆಯುವ ಸಮಯದಲ್ಲಿ ವಿಧವಾ ವಿವಾಹಕ್ಕೆ ಮೈಸೂರಂಥ ಸಂಪ್ರದಾಯಸ್ಥ ನಗರ ಸರಿಯಾದ ತಾಣವಾಗಿರಲಿಲ್ಲ. ಈ ಸಂಗತಿ ಕಾತ್ಯಾಯನಿಯ ಯೌವನದ ಬಯಕೆಗಳ ತೀಕ್ಷ್ಣತೆಯನ್ನು ಮತ್ತು ಅವಳ ಸ್ವಾತಂತ್ರ್ಯಪ್ರೀತಿಯನ್ನು ಎತ್ತಿ ತೋರಿಸುತ್ತದೆ.

ಇನ್ನೊಂದು ಕಡೆ ಸದಾಶಿವರಾಯರ ಕನಸು. ಅವರದು ಭಾರತೀಯ ಸಂಸ್ಕೃತಿ ಮತ್ತು ಇತಿಹಾಸಗಳನ್ನು ಕುರಿತು ಉದ್ಗ್ರಂಥವನ್ನು ರಚಿಸಬೇಕೆಂಬ ಹಂಬಲ. ಸಾಕಷ್ಟು ಸಾಮರ್ಥ್ಯ ಅವರಲ್ಲಿತ್ತು ಎಂಬುದನ್ನು ಭೈರಪ್ಪನವರು ನಮಗೆ ತೋರಿಸುತ್ತಾರೆ. ಇವರ ವಿದ್ವನ್ಮಿತ್ರರು ನಂಜನಗೂಡಿನ ಶ್ರೀನಿವಾಸ ಶ್ರೋತ್ರಿಯರು. ಇಬ್ಬರೂ ವಿದ್ವಾಂಸರಾದರು ಅವರಲ್ಲಿರುವ ಭೇದವನ್ನು ಭೈರಪ್ಪನವರು ಸೂಕ್ಷ್ಮವಾದರೂ ಸೊಗಸಾಗಿ ತೋರಿದ್ದಾರೆ. ಸದಾಶಿವರಾಯರದ್ದು ಪಾಶ್ಚಾತ್ಯರ ರೀತಿ. ಅಧ್ಯಯನ ಮಾಡಬೇಕು, ಗ್ರಂಥರಚನೆ ಮಾಡಬೇಕು ಎಂಬ ಹಂಬಲ, ಸ್ವಲ್ಪ ಕೀರ್ತಿಯ ಆಸೆಯೂ ಕಾಣುತ್ತದೆ. ಸಂಸ್ಕೃತಿಯ ಅಧ್ಯಯನಕ್ಕೂ ಜೀವನಕ್ಕೂ ಸಂಬಂಧವಿಲ್ಲದ ಹಾಗೆ ನಡೆಯುತ್ತಾರೆ. ಅಧ್ಯಯನಕ್ಕಾಗಿ ಅಧ್ಯಯನ ಎಂಬುದು ಅವರ ರೀತಿ. ಆದರೆ ಶ್ರೀನಿವಾಸ ಶ್ರೋತ್ರಿಯರದು ಅಪ್ಪಟ ಭಾರತೀಯ ರೀತಿ. ಸದಾಶಿವರಾಯರ ಸಂದೇಹಗಳನ್ನು ಪುಸ್ತಕಗಳನ್ನು ನೋಡದೆಯೇ ಪರಿಹರಿಸಬಲ್ಲ ವಿದ್ವತ್ತು ಇವರಲ್ಲಿದ್ದರೂ, ಪುಸ್ತಕ ರಚನೆಗೆ ಕೈಹಾಕಿದವರಲ್ಲ. ಕೀರ್ತಿಯ ಲಾಲಸರಲ್ಲ. ತಮ್ಮ ಓದನ್ನೆಲ್ಲ ಬದುಕಿನಲ್ಲಿ ಕಾಣಿಸುವ ಋಷಿಕಲ್ಪ ವ್ಯಕ್ತಿತ್ವ ಇವರದು. ಭೈರಪ್ಪನವರ ideal ಏನು, ಅವರ ವೈಯಕ್ತಿಕ ಅಭಿಪ್ರಾಯವೇನು, ಅವರ ಒಲವೆಲ್ಲಿದೆ ಎಂದು ಇವರಿಬ್ಬರ ಪಾತ್ರಗಳ ಅಧ್ಯಯನದಿಂದ ಚೆನ್ನಾಗಿ ತಿಳಿಯಬಹುದು. ಭೈರಪ್ಪನವರಿಗೆ ಪಾಶ್ಚಾತ್ಯರ ಬಗ್ಗೆ ಗೌರವ ಮತ್ತು ಕಾಳಜಗಳಿವೆ, ಆದರೆ ಭಾರತೀಯ ವಿಚಾರಧಾರೆಯಲ್ಲಿ ಶ್ರದ್ಧೆಯಿದೆ ಎಂಬುದನ್ನು ಸುವಿದಿತ ಮಾಡಿಸುತ್ತಾರೆ.

ಸದಾಶಿವರಾಯರ ಹಂಬಲವು ಬೌದ್ಧಿಕ ಸಾಹಚರ್ಯವನ್ನು ಅಪೇಕ್ಷಿಸುವ ಬಗೆ ಸೊಗಸಾಗಿ ವ್ಯಕ್ತವಾಗಿದೆ. ಓದು-ಬರಹ ತಿಳಿಯದ ಪತ್ನಿಯಿಂದ ಬೌದ್ದಿಕ ಸಾಹಚರ್ಯ ಸಿಗದ ರಾಯರಿಗೆ ಶ್ರೀಲಂಕದವಳಾದ ಕೇಂಬ್ರಿಡ್ಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ಕರುಣಾ ರತ್ನೆ ಜೊತೆಯಾಗಿ ಸಿಗುತ್ತಾಳೆ. ವಿದ್ಯಾರ್ಥಿನಿಯಾಗಿ ರಾಯರ ಜತೆ ಕೆಲಸ ಮಾಡಲು ಪ್ರಾರಂಭಿಸುವ ಕರುಣಾಳಿಗೆ ಕ್ರಮೇಣ ರಾಯರು ಅನಿವಾರ್ಯರಾಗುತ್ತಾರ, ಜೀವನದ ಗುರಿಯನ್ನು ತಲುಪಲು ಸಾಧನವಾಗುತ್ತಾರೆ. ರಾಯರಿಗೂ ಹಾಗೇ ಆಗಿ ಇಬ್ಬರೂ ಸಿವಿಲ್ ಮದುವೆ ಕೂಡ ಆಗುತ್ತಾರೆ. ಒಂದಂಶ ಇಲ್ಲಿ ನನಗೆ ಅಷ್ಟು ಹಿಡಿಸಲಿಲ್ಲ . ಕರುಣಾ ಎಂಬ ಸೊಗಸಾದ ಹೆಸರನ್ನು ಪಡೆದವಳನ್ನು ಭೈರಪ್ಪನವರು "ರತ್ನೆ" ಎಂದೇ ರಾಯರಿಂದ ಕರೆಸುತ್ತಾರೆ. ರತ್ನೆಯೆಂಬುದು surname. ಪತಿಪತ್ನಿಯರಿಬ್ಬರ ನಡುವೆ ಈ surname ಸಂಬೋಧನೆ ಅಷ್ಟು ಸರಿಯಿಲ್ಲ. ಅಥವಾ - ಇವರಿಬ್ಬರೂ ತಮ್ಮ profession ಗಾಗಿಯೇ ಹತ್ತಿರ ಬಂದದ್ದು, ಕೊನೆಯವರೆಗೂ ಇವರ ಸಂಬಂಧ ಹಾಗೆಯೇ ಉಳಿಯಿತು ಎಂಬುದನ್ನು ಓದುಗರಿಗೆ ಚೆನ್ನಾಗಿ ತಿಳಿಸುವುದಕ್ಕೆ ಹೀಗೆ ಉತ್ಪ್ರೇಕ್ಷೆ ಮಾಡಿದ್ದಾರೋ ಏನೋ! ದ್ವಿಪತ್ನೀತ್ವದಲ್ಲಿ ಓದದ ಹೆಂಡತಿಗೆ ತೊಂದರೆಯಿಲ್ಲ, ಆದರೆ ಓದಿದ ಹೆಂಡತಿಗೆ ತೊಂದರೆ. ಈ ಇಕ್ಕಟ್ಟಿನಲ್ಲಿ ಸದಾಶಿವರಾಯರನ್ನು ಸಿಕ್ಕಿಸಿ ಕೊನೆಯವರೆವಿಗೂ ಒದ್ದಾಡಿಸುತ್ತಾರೆ. ಏನೂ ತಿಳಿಯದ ಹೆಂಡತಿ ಆತಂಕದ ಸಮಯದಲ್ಲಿ ರಾಮನಾಮವನ್ನು ಬರೆದು ದುಗುಡ ಮರೆಯಲು ಯತ್ನಿಸಿ ಮರೆಯುವುದರಲ್ಲಿ ಯಶಸ್ವಿನಿಯೂ ಆಗುತ್ತಾಳೆ. ಇದರಿಂದ ಭೈರಪ್ಪನವರು ಮುಗ್ಧ ನಂಬಿಕೆಗೆ ಒಳ್ಳೆಯ ಸ್ಥಾನವನ್ನೇ ಕೊಟ್ಟ ಹಾಗೆ ಕಾಣುತ್ತದೆ. ಇದರಿಂದ ನಾಗಲಕ್ಷ್ನ್ಮಿಯಲ್ಲಿ ಮೂಡುವ ಒಂದು ನಿರ್ಲಿಪ್ತತೆ ಕೂಡ ನಿದರ್ಶನವೆಂಬುದಾಗಿ ಸಾರಿದ್ದಾರೆ.

ಕಾತ್ಯಾಯನಿ ಮದುವೆಯಾದ ಆರಂಭದ ದಿನಗಳಲ್ಲಿ ಬಹಳ ಸಂತೋಷದಿಂದಿದ್ದರೂ ಒಂದೆರಡು ವರ್ಷಗಳಲ್ಲಿ ತನ್ನ ಹಳೆಯ ಕುಟುಂಬದ ಬಗ್ಗೆ ನೆನಪು ಮಾಡಿಕೊಳ್ಳುತ್ತಾಳೆ. ಜತೆಗೆ ಅವಳಿಗಾಗುವ ಗರ್ಭಪಾತಗಳಿಂದ ಅವಳಿಗೆ ಮಕ್ಕಳಾಗಲು ಸಾಧ್ಯವಿಲ್ಲದೇ ಹೋಗುತ್ತದೆ. ಇದಾದ ಮೇಲಂತೂ ತನ್ನ ಮಗನಾದ ಚೀನಿಯ ಬಗ್ಗೆ ಹೆಚ್ಚಿನ ವಾತ್ಸಲ್ಯ ಅವಳಲ್ಲಿ ಮೂಡಿದರೂ ಏನೂ ಮಾಡಲಾರದೆ ಹೋಗುತ್ತಾಳೆ. ಚೀನಿಯನ್ನು ಕರೆತರುವ ಅವಳ ಪ್ರಯತ್ನಗಳು ವಿಫಲವಾಗಿ ಅವಳ ಖಿನ್ನತೆಗೆ ದಾರಿಯಾಗುತ್ತವೆ. ದುರದೃಷ್ಟವಶಾತ್ ಕಾತ್ಯಾಯನಿಯು ಈ ಗರ್ಭಪಾತಗಳೆಲ್ಲ ಅವಳ ಮಾವನವರ ಮನೆಯನ್ನು ಬಿಟ್ಟೂ ಪುನರ್ವಿವಾಹವಾದದ್ದಕ್ಕೆ ಎಂದು ಬಗೆದು ಮಾನಸಿಕ ರೋಗಕ್ಕೆ ತುತ್ತಾಗುತ್ತಾಳೆ. ಕಾಲೇಜಿಗೆ ಬರುವ ಮಗನೂ ಸಹ ತನ್ನನ್ನು ನಿರಾಕರಿಸಿದಾಗ ಅವಳ ರೋಗ ಉಲ್ಬಣಿಸಿ ಸಮಾಧಾನವಿಲ್ಲದೆಯೇ ಕೊರಗುತ್ತಾಳೆ.

ಈಕೆಯ ವಿಧವಾ-ವಿವಾಹ ಮತ್ತು ವಂಶವೃಕ್ಷದ ಕಲ್ಪನೆಯ ನಡುವಿನ ಘರ್ಷಣೆ ಕೆಲವು ಒಳ್ಳೆಯ ಚಿಂತನೆಗಳನ್ನು ಮೂಡಿಸಿದೆ. ಭೈರಪ್ಪನವರು ಎತ್ತುವ ಪ್ರಶ್ನೆ - ಒಂದು ವಂಶವೃಕ್ಷದ ಬೀಜವನ್ನು ಫಲಿಸಿದ ಕ್ಷೇತ್ರ ಮತ್ತೊಂದು ವಂಶದ ಕ್ಷೇತ್ರವಾಗುವಾಗ ಏನಾಗಬಹುದು - ಎಂಬುದು? ಈ ಪ್ರಶ್ನೆ ಓದುಗರನ್ನೂ ಕಾಡಿಸುತ್ತದೆ. ಪುಸ್ತಕ ಓದಿದ ಬಹಳ ದಿನಗಳ ಮೇಲೆಯೂ!

ಬರುಬರುತ್ತಾ ಕೊನೆಯ ನೂರು ಪುಟಗಳಲ್ಲಿ ಅಕಸ್ಮಾತ್ತಾಗಿ ಗೋಚರವಾಗುವ ಸತ್ಯ ಶಾಂತರೂ ದಾಂತರೂ ಆದ ಶ್ರೀನಿವಾಸ ಶ್ರೋತ್ರಿಯರಿಗೂ ಆಘಾತಕರವಾಗಿ ಪರಿಣಮಿಸುತ್ತದೆ. ಪುತ್ರನ ಆಕಸ್ಮಿಕ ಮರಣದ ಸಮಯದಲ್ಲೂ ಅಲ್ಲಾಡದ ಬೆಟ್ಟದಂಥಿದ್ದ ಅವರ ವ್ಯಕ್ತಿತ್ವ ಈ ಸತ್ಯದಿಂದ ಸ್ವಲ್ಪ ಪೆಟ್ಟು ತಿನ್ನುತ್ತದೆ. (ಅದು ಏನು ಎಂದು ನಾನು ಹೇಳಿದರೆ ಓದುಗರಾದ ನೀವು ಈ ಪುಸ್ತಕವನ್ನು ಓದದೇ ಇರಬಹುದು. ಪುಸ್ತಕ ಓದಿದವರಿಗೆ ಹೇಗಿದ್ದರೂ ಗೊತ್ತು ತಾನೆ?) ವಂಶದ ಬಗ್ಗೆ ಬಹಳ ಹೆಚ್ಚಿನ ಗೌರವವಿರಿಸಿದ ಶ್ರೋತ್ರಿಯರಿಗಂತೂ ಈ ಆಘಾತ ಕಷ್ಟಸಹ್ಯವಾಗುತ್ತದೆ. ಅಷ್ಟೇ ಏಕೆ? ಅವರ ವಂಶಗೌರವವೆಂಬ ಕಲ್ಪನೆಯನ್ನೇ ಬುಡಮೇಲು ಮಾಡುತ್ತದೆ. ಆದರೆ ಹಿಂದೆ ಆತಂಕ ಮೂಡಿಸುವ ದುವಿಧೆಗಳಲ್ಲಿ ಗೆದ್ದು ಬಂದಿದ್ದ ಶ್ರೋತ್ರಿಯರು ಇಲ್ಲಿಯೂ ಕಡೆಯಲ್ಲಿ ಗೆಲ್ಲುತ್ತಾರೆ. "ಧರ್ಮದ ಮಾರ್ಗದಲ್ಲಿ ನಡೆಯುವವರಿಗೆ ಧರ್ಮವೇ ಮಾರ್ಗ ತೋರುತ್ತದೆ" ಎಂಬ ಅಚಲ ನಂಬಿಕೆಯನ್ನು ಹೊಂದಿದ ಶ್ರೋತ್ರಿಯರು ಅಂತ್ಯದಲ್ಲಿ ಭಾರತೀಯ ಆಶ್ರಮಧರ್ಮದ ಪಾಲನೆಯನ್ನೇ ಮಾಡುತ್ತಾರೆ.

ಒಂದು ಭಾಗವನ್ನು ಮಾತ್ರ ಇಲ್ಲಿ ನಂಬಲು ಕಷ್ಟ. ಮನೆಯ ಕೆಲಸದವಳಾದ, ಶ್ರೋತ್ರಿಯರಿಗಿಂಥ ಸ್ವಲ್ಪ ಚಿಕ್ಕವಳಾದ ಲಕ್ಷ್ಮಿಗೆ ತಿಳಿದ ಒಂದು ಸತ್ಯ ಇವರಿಗೆ ಹೇಗೆ ತಿಳಿಯದೇ ಹೋಯಿತೆಂಬುದು. ಅದೂ ಅದೇ ಊರಿನಲ್ಲಿಯೇ ಇದ್ದಂಥವರಾದ ಶ್ರೋತ್ರಿಯರು ತಕ್ಕ ಮಟ್ಟಿಗೆ ಜನಜನಿತವಾದ ಒಂದು ವಾರ್ತೆಯನ್ನು ತಿಳಿಯದೇ ಹೋದರಲ್ಲಾ ಎಂದು ನಂಬಲು ಸ್ವಲ್ಪ ಕಷ್ಟ. ಆದರೂ ಹೇಳುತ್ತಾರಲ್ಲಾ, ಕಾವ್ಯಾಸ್ವಾದನೆಗೆ ಅಥವಾ ರಸಾಸ್ವಾದನೆಗೆ ಮೊದಲಿಗೆ ಬೇಕಾಗಿರುವುದು ಕೋಲ್ರಿಜ್ ಹೇಳಿದ "willing suspension of disbelief". ನಾವೂ ಇಲ್ಲಿ ಅದನ್ನೇ ಆಶ್ರಯಿಸಿದಾಗೆ ಒದುಗರಿಗೆ ಒಂದು ಅದ್ಭುತ ಪ್ರಸಂಗ ಮೂಡುತ್ತದೆ. ಒಬ್ಬ ಮಹಾಪುರುಷನು ಒದಗಿದ ಕಷ್ಟವನ್ನು ಹೇಗೆ ನಿಭಾಯಿಸಬಲ್ಲ ಎಂಬುದು ಎಲ್ಲ ಓದುಗರಿಗೆ ಆಗುವ ಒಂದು ಪಾಠ. ಅದನ್ನು ದರ್ಶನಶಾಸ್ತ್ರವನ್ನು ಅಭ್ಯಸಿಸಿದ ಭೈರಪ್ಪನವರು ಚೆನ್ನಾಗಿಯೇ ಮಾಡಿಸುತ್ತಾರೆ.

ಈ ಪುಸ್ತಕದ ಮೇಲೆ ಚಿತ್ರವನ್ನು ಮಾಡಿದ ಗಿರೀಶ್ ಕಾರ್ಣಾಡರ ಪ್ರಕಾರ ಈ ಸಿನಿಮಾ ಕೃತಿ ತಮ್ಮ ಅತ್ಯಂತ ದುರ್ಬಲ ಕೃತಿಗಳಲ್ಲಿ ಒಂದು ಎಂಬುದು. ಹಾಗೆ ಹೇಳಲು ಕಾರಣ ಸ್ವಲ್ಪವಿದೆಯೋ ಏನೋ! ಕಾತ್ಯಾಯನಿಯ ಪಾಡು ಎಂಥ ನಾಯಿಗೂ ಬೇಡವೆಂಬಂತೆ ನಿರೂಪಿಸಿದ ಭೈರಪ್ಪನವರು ಆಧುನಿಕ ಕಾದಂಬರಿಕಾರನ ಮುಸುಕು ಹಾಕಿಕೊಂಡ "ಸನಾತನಿ" ಎಂಬುದೇ ಆ ಕಾರಣವಿರಬಹುದೇ? ಆಧುನಿಕನಾದ ನನ್ನಲ್ಲೂ ಈ ವಿಷಯ ಸ್ವಲ್ಪ ಕಳವಳ ಮೂಡಿಸದೇ ಇರಲಿಲ್ಲ. ಈಗ ಯುವತಿಯಾದ ಒಬ್ಬ ವಿಧವೆ ಮತ್ತೆ ಮದುವೆಯೇ ಆಗಬಾರದೇ? ಮಕ್ಕಳಿಲ್ಲದಿದ್ದರೆ ಹೇಗೆ? ಮಕ್ಕಳಿದ್ದರೆ ಹೇಗೆ? ಇಲ್ಲಿ ಅಸಂಖ್ಯಾತ ಸಾಧ್ಯತೆಗಳಿದ್ದರೂ ಅವುಗಳಲ್ಲಿ ಒಂದನ್ನು ತೋರಿಸಿ ಈ ವಿಷಯದ ಬಗ್ಗೆ ಚಿಂತನೆಯನ್ನು ಪ್ರಚೋದಿಸುವುದೇ ಭೈರಪ್ಪನವರ ಕಥನಾಕೌಶಲವೆಂದು ಹೇಳಬೇಕೇ ಹೊರತು "ಅವರು ಹಾಗೆ ಚಿತ್ರಿಸಿದ್ದಾರೆ, ಆದ್ದರಿಂದ ಅವರು ಸನಾತನಿಗಳು" ಎಂದು ಹೇಳುವುದು ನನ್ನ ಪ್ರಕಾರ ಸರಿಯೆನಿಸುವುದಿಲ್ಲ.

ಇನ್ನೊಂದು ಸಣ್ಣ ತಪ್ಪೂ ಪುಸ್ತಕದಲ್ಲಿದೆ. ಕೊಲಂಬಸನು ಅಮೇರಿಕೆಯನ್ನು ಕಂಡುಹಿಡಿದನೆಂದರೆ ಅದು ಹಾಸ್ಯಾಸ್ಪದವಾದ ಸಂಗತಿಯನ್ನು ಹೇಳುತ್ತಾ ಹೊರಟ ಭೈರಪ್ಪನವರು ಅಲ್ಲಿ ಭಾರತೀಯ ಮೂರ್ತಿಗಳ ಅವಶೇಷಗಳಿದ್ದವು ಎಂದು ನನ್ನ ಪ್ರಕಾರ ತಪ್ಪಾಗಿ ಬರೆದಿದ್ದಾರೆ. ಇದಕ್ಕೆ ಪುರಾವೆ ಎಲ್ಲಿಯೂ ಇಲ್ಲ ಎಂದು ನನ್ನ ತಿಳಿವಳಿಕೆ. ತಪ್ಪಿದ್ದಲ್ಲಿ ತಿದ್ದಿಕೊಳ್ಳಲು ಸಿದ್ಧನಾಗಿರುವೆ.

ಒಟ್ಟಿನಲ್ಲಿ, ಚಿಂತನೆಗೆ ಒಳ್ಳೆಯ ಗ್ರಾಸವಾಗುವ ಈ ವಂಶವೃಕ್ಷ ಅತ್ಯಂತ ಜನಪ್ರಿಯ ಕಾದಂಬರಿಗಳಲ್ಲಿ ಒಂದು. ಈ ಪುಸ್ತಕವನ್ನೋದಿದ ಅಥವಾ ಓದದ ಇತರರಿಗೆ ನನ್ನ ಅನಿಸಿಕೆಗಳನ್ನು ಓದಿ ಏನನ್ನಿಸಿದೆಯೋ ಎಂಬುದನ್ನು ತಿಳಿಯಲು ನಾನು ಕುತೂಹಲಿಯಾಗಿದ್ದೇನೆ.

4 comments:

Unknown said...

ಇಡೀ ಕಾದಂಬರಿಯನ್ನು ಕೆಲವೇ ವಾಕ್ಯಗಳಲ್ಲಿ ಬಹಳ ಚೆನ್ನಾಗಿ ಹಿಡಿದಿಟ್ಟಿದ್ದೀರಿ.

ಆದರೆ ಭೈರಪ್ಪನವರು "ಸನಾತನಿ" ಎನ್ನುವುದು ನನಗೆ ಸರಿ ಎನಿಸುವುದಿಲ್ಲ. ಶ್ರೋತ್ರಿಗಳ ಪಾತ್ರವು ಸೋಲುವುದೇ ಇದಕ್ಕೆ ಉದಾಹರಣೆ. ಕ್ಯಾತ್ಯಾಯನಿಯ ನಾಯಿಪಾಡಂತೆ, ತಾನು ಜೀವಮಾನ ಪೂರ್ತಿ ಕಷ್ಟಪಟ್ಟು ಬರೆದ ಪುಸ್ತಕ ತನ್ನ ಮಗನಿಗೇ ಬೇಡವಾಗುವ ಸದಾಶಿವರಾಯರ ಸ್ಥಿತಿ ಮತ್ತು ಸದಾ ವಂಶದ ಬಗ್ಗೆಯೆ ಯೋಚಿಸುವ ಶ್ರೋತ್ರಿಗಳಿಗೆ ಕೊನೆಯಲ್ಲಿ ಆಗುವ ಆಘಾತ ಭೈರಪ್ಪನವರು ಪಕ್ಷಪಾತಿಯಲ್ಲ ಎನ್ನುವುದನ್ನು ನಿರೂಪಿಸುತ್ತದೆ.

ಮದುವೆಯ ಉದ್ದೇಶವನ್ನು ಕಾಮ-ಅರ್ಥ-ಧರ್ಮಗಳ ಚೌಕಟ್ಟಿನಲ್ಲಿ ಕಾತ್ಯಾಯಿನಿ-ಸದಾಶಿವರಾವ್-ಶ್ರೋತ್ರಿಗಳ ಪಾತ್ರಗಳ ಮೂಲಕ ವಿಶ್ಲೇಷಿಸಿ ಈ ಪ್ರತಿಯೊಂದು ಪುರುಷಾರ್ಥದ ಅಪೂರ್ಣತೆಯನ್ನು ಸಾರುವುದೇ ಕಾದಂಬರಿಯ ಮೂಲ ಉದ್ದೇಶ ಎನ್ನುವುದು ನನ್ನಭಾವನೆ.

nIlagrIva said...

ಕಲ್ಯಾಣ್ ಅವರೆ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ನೀವು ಸರಿಯಾಗಿ ಗಮನಿಸಿದ್ದರೆ ನಾನು ಭೈರಪ್ಪನವರು "ಸನಾತನಿ" ಎಂದು ಅಭಿಪ್ರಾಯ ಪಟ್ಟಿಲ್ಲ. ಪೂರ್ವಪಕ್ಷದವರು ಹೇಳುವ ರೀತಿಯಲ್ಲಿ ಹೇಳಿದ್ದೆ ಅಷ್ಟೆ. ಅದು ಸರಿಯಾಗಿ ಕಾಣದೆ ಹೋದದ್ದಕ್ಕೆ ನಾನೇ ಕಾರಣ. ವಸ್ತುತಃ ನನ್ನ ಸಿದ್ಧಾಂತ - ಭೈರಪ್ಪನವರು ಸನಾತನಿ ಎಂಬ ಹಣೆಪಟ್ಟಿ ಇಟ್ಟುಕೊಂಡವರೇನೂ ಅಲ್ಲ ಎಂಬುದೇ!

ನೀವು ಅರ್ಥೈಸಿದ ರೀತಿ ಚೆನ್ನಾಗಿದೆ. ಕಾತ್ಯಾಯನಿ ಮುಂತಾದ ಪಾತ್ರಗಳಲ್ಲಿ ಕಾಣುವುದು ಪುರುಷಾರ್ಥಗಳ ಅಪೂರ್ಣತೆ ಎಂಬ ನಿಮ್ಮ ಗ್ರಹಿಕೆ ಸರಿಯಾಗಿದೆ. ಹಾಗೆಯೂ ನಾನು ಯೋಚನೆ ಮಾಡಿದ್ದುಂಟು ಆದರೆ ನಿಮ್ಮಷ್ಟು ನಿಖರವಾಗಿ ಹೇಳಲಾರದೆ ಹೋದೆ.

ಆದರೆ ಶ್ರೋತ್ರಿಗಳು, (ಅರ್ಥಾತ್ ಧರ್ಮ) ಸೋಲಲಿಲ್ಲ ಎಂದೇ ನಾನು ನಂಬುವುದು. ಶ್ರೋತ್ರಿಗಳ ವಂಶದ ಮೇಲಿನ ಮಮತೆ ಸತ್ತರೂ ಅವರ ಬುದ್ಧಿ ಮತ್ತು ಧರ್ಮಪ್ರಜ್ಞೆ ಅವರನ್ನು ಕೈಬಿಡಲಿಲ್ಲ. ಈಗ ಆ ವಂಶದವರು ತಾವಲ್ಲವೆಂಬುದನ್ನು ಕಂಡ ತಕ್ಷಣ ಆ ವಂಶದವರಿಗೇ ಆಸ್ತಿ ಸೇರಬೇಕೆಂಬ ಅವರ ಧರ್ಮಪ್ರಜ್ಞೆ ಉಳಿಯಿತಲ್ಲ? ಅರ್ಥಕಾಮಗಳು ಧರ್ಮ-ಮೋಕ್ಷಗಳೆಂಬ ತೀರಗಳನ್ನು ದಾಟದ ನದಿಯಾಗಿರಬೇಕೆಂಬುದು ಭೈರಪ್ಪನವರ ಆಶಯ ಇದ್ದರೂ ಇರಬಹುದು. ಧರ್ಮವೆಂದರೆ ಅಂಧಶ್ರದ್ಧೆಯನ್ನು ಕುರಿತು ನಾನು ಹೇಳುತ್ತಿಲ್ಲ, ಆದರೆ ಆ ಹೆಸರಿನ ಪುರುಷಾರ್ಥವನ್ನು ಕುರಿತು.

Anonymous said...

Swami Harshananda's "The medival India" has a list of references which point to arguments that Americans were not totally isolated from the Known World.

One argument that i have come across is that all civilisations have similar constallations (The RAM is Mesha etc.)

I generally take Bhyrappa's points as postulates, something towards which some amount of serious study has been done by author. Only if i differ too much with them, i try to explore more on them.

Anand Sutar said...

Hi, I read "VAMSHAVRUKSHA" recently. Tried all options to get the movie. Can you suggest me where i can get the CD/DVD of movies (on bhyrappa's novels)? Hope i am lucky enough to get info from your side.


Thanks in advance.